ಯಲ್ಲಾಪುರ : ‘ ಪ್ರಥಮ ಪ್ರಯೋಗವಾಗಿ ಯಲ್ಲಾಪುರದಲ್ಲಿ ಆಯೋಜಿಸಿದ್ದ ‘ಗಾಳಿಪಟ ಉತ್ಸವ’ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ರಾಷ್ಟ್ರಮಟ್ಟದವರೆಗೂ ಬೆಳೆಯಲಿ. ಗಾಳಿಪಟ ಉತ್ಸವದ ಮೂಲಕ ಯಲ್ಲಾಪುರವನ್ನು ಗುರುತಿಸುವಂತಾಗಲಿ’ ಎಂದು ಉತ್ತರ ಕನ್ನಡ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗೋಪಾಲಕೃಷ್ಣ ಬೇಕಲ್ ಹೇಳಿದರು.
ಮಕರ ಸಂಕ್ರಮಣದ ಪ್ರಯುಕ್ತ ಡಾ.ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟ್, ಸಹ್ಯಾದ್ರಿ ನಿಸರ್ಗ ಬಳಗ, ಬಿಕ್ಕು ಗುಡಿಗಾರ ಕಲಾ ಕೇಂದ್ರ, ಉಮಾಮಹೇಶ್ವರ ಯುವ ಸೇನಾ ಹಾಗೂ ಮಾತಾ ಇಲೆಕ್ಟ್ರಿಕಲ್ಸ್ ವತಿಯಿಂದ ಪಟ್ಟಣದ ಕಾಳಮ್ಮನಗರದಲ್ಲಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಗಾಳಿಪಟ ಉತ್ಸವ’ದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಉತ್ಸವದಲ್ಲಿ ಆಯೋಜಿಸಲಾಗಿದ್ದ ಅಲಂಕಾರಿಕ ಗಾಳಿಪಟ ಪ್ರದರ್ಶನ ಮತ್ತು ಹಾರಾಟ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಶಲ್ಯ ಪ್ರಹ್ಲಾದ ನಾಯ್ಕ ಪ್ರಥಮ ಹಾಗೂ ಅನುಷ್ ಆರ್. ನಾಯ್ಕ ದ್ವಿತೀಯ ಹಾಗು ಹಿರಿಯರ ವಿಭಾಗದಲ್ಲಿ ಜಿ.ಎಂ.ತಾಂಡುರಾಯನ್ ಪ್ರಥಮ ಹಾಗೂ ನಾಗರಾಜ ನಾಯ್ಕ ದ್ವಿತೀಯ ಸ್ಥಾನ ಗಳಿಸಿದರು.
ಆಕರ್ಷಕ ಗಾಳಿಪಟ ಬಹುಮಾನವನ್ನು ಆಕಾಶ್ ಗುಡಿಗಾರ ಪಡೆದುಕೊಂಡರು. ಉದ್ಯಮಿ ಬಾಲು ನಾಯಕ, ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ಡಾ.ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟ್ ,ತಾಲ್ಲೂಕು ಪತ್ರಕರ್ತರ ಸಂಘ, ಬಿಕ್ಕು ಗುಡಿಗಾರ ಕಲಾ ಕೇಂದ್ರ ಬಹುಮಾನಗಳ ಪ್ರಾಯೋಜಕರಾಗಿದ್ದರು. ವೆಂಕಟೇಶ್ ಶೆಟ್ಟಿ ಹಾಗೂ ಜಿ.ಎಂ.ಶಾಸ್ತ್ರಿ ಭಾಗವಹಿಸಿದವರೆಲ್ಲರಿಗೂ ಪ್ರೋತ್ಸಾಹಕ ಬಹುಮಾನ ನೀಡಿದರು. ತಹಶೀಲ್ದಾರ್ ಡಿ.ಜಿ.ಹೆಗಡೆ ಉಪಸ್ಥಿತಸಿದ್ದರು.
ಸಂತೋಷ ಗುಡಿಗಾರ್, ನಾಗರಾಜ ಮದ್ಗುಣಿ, ಸತೀಶ ಯಲ್ಲಾಪುರ, ಗಣೇಶ ಪಂಡರಾಪುರ, ನರಸಿಂಹ ಸಾತೊಡ್ಡಿ, ಗಣೇಶ ಬಂಟ್ ವೇದಿಕೆಯಲ್ಲಿದ್ದರು. ಸಂಜೀವಕುಮಾರ ಹೊಸಕೇರಿ ಹಾಗೂ ಚಂದ್ರಹಾಸ್ ನಾಯ್ಕ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.