ಹಳಿಯಾಳ: ಅಂಬೇಡ್ಕರ್ ಭವನವನ್ನು ಧಾರವಾಡ ರಸ್ತೆ ಪಕ್ಕದಲ್ಲಿರುವ ದಲಿತರ ಕಾಲೊನಿ ಇಂದಿರಾ ನಗರ ಹತ್ತಿರವೇ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ವಾರ್ಡ್ಗಳ ದಲಿತ ಸಮಾಜದವರು ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ಮಧ್ಯಾಹ್ನ ವಿವಿಧ ಬಡಾವಣೆಯ ದಲಿತ ಸಮಾಜದವರು ಸೇರಿ ಪ್ರತಿಭಟನಾ ಧರಣಿಯಲ್ಲಿ ಕೆಲಹೊತ್ತು ಪಾಲ್ಗೊಂಡು ನಂತರ ಮೆರವಣಿಗೆ ಮೂಲಕ ಪುರಸಭೆಗೆ ತೆರಳಿ ಮನವಿ ಸಲ್ಲಿಸಿದರು.
ಸರ್ಕಾರದಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹1 ಕೋಟಿ ಮಂಜೂರು ಆಗಿದ್ದು, ಸುತ್ತೋಲೆ ನಿರ್ದೇಶನದಂತೆ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಜನರು ವಾಸಿಸುವ ಕಾಲೊನಿ ಪಕ್ಕದಲ್ಲಿ 20 ಗುಂಟೆ ನಿವೇಶನವನ್ನು ಚುನಾಯಿತ ಜನಪ್ರತಿನಿಧಿಗಳು ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಡಾವಳಿ ಪಹಣಿ ಪತ್ರಿಕೆಯೊಂದಿಗೆ ಭವನ ಮಂಜೂರಾತಿಗೆ ನೀಡಬೇಕೆಂದಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ದಾಖಲಾತಿಯೊಂದಿಗೆ ಪುರಸಭೆಗೆ ಕಳುಹಿಸಿದ್ದಾರೆ. ಆದರೆ, ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳು ದಲಿತರ ಕಾಲೊನಿಯ ಪಕ್ಕ ಎಲ್ಲಿಯೂ ಜಾಗವಿಲ್ಲವೆಂದು ಪಟ್ಟಣದ ಹೊರಭಾಗ ಗುಡ್ನಾಪುರ ರಸ್ತೆಗೆ ತಾಗಿ ದಲಿತರಿಲ್ಲದ ಸ್ಥಳದಲ್ಲಿ 20 ಗುಂಟೆ ಜಾಗ ನೀಡಲು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಮುಖಂಡರಾದ ಹನುಮಂತ ಚಲವಾದಿ, ಮಾರುತಿ ಕಲಭಾವಿ, ಯಲ್ಲಪ್ಪಾ ಹೋನ್ನೋಜಿ, ರವಿ ವಡ್ಡರ, ಮುತ್ತಯ್ಯಾ ಮಾದರ, ರಮೇಶ ಮಾದರ, ಮಾರುತಿ ಕುರಿಯರ, ಪ್ರಕಾಶ ಗೌಡಪ್ಪನವರ, ಕುಮಾರ ಕಲಭಾವಿ, ಚೆನ್ನಪ್ಪಾ ಮಡ್ಡಿ, ಮಂಜುನಾಥ ಗಜಾಕೋಶ, ಮಂಜುಳಾ ಮಾದರ, ಕತ್ತೂರಿ ಕೋರಿಯಾರ, ಉದಯ ಗಜಾಕೋಶ, ಜ್ಞಾನೇಶ್ವರ ಗಜಾಕೋಶ, ಸುಬ್ಬವ್ವಾ ಮಾದರ, ಆಕಾಶ ಚಲವಾದಿ, ರಾಚವ್ವಾ ಚಲವಾದಿ, ನಾರವ್ವಾ ಮಾದರ, ಶಾಂತಮ್ಮಾ ಮಾದರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.