ಸಿದ್ದಾಪುರ: ‘ಬರಗಾಲದ ಹಿನ್ನೆಲೆಯಲ್ಲಿ ಭತ್ತದ ರೈತರಿಗೆ ನೀಡುತ್ತಿರುವ ಬೆಳೆ ನಷ್ಟದ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಭಾರಿ ಬಿಸಿಲಿನ ಕಾರಣದಿಂದ ಜಿಲ್ಲೆಯಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಒಣಗಿದ್ದು, ಆ ಹಾನಿಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಡಿಕೆ ಮತ್ತು ತೆಂಗಿನ ಮರಗಳು ಒಣಗಿ ಉಂಟಾಗಿರುವ ಹಾನಿಯನ್ನು ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಸಮೀಕ್ಷೆ ನಡೆಸಬೇಕು’ ಎಂದರು.
‘ಈಗ ಒಣಗಿರುವ ಅಡಿಕೆ ಮರಗಳು ಪುನಃ ಫಸಲಿಗೆ ಬರಬೇಕಾದರೆ 8–10 ವರ್ಷಗಳು ಬೇಕಾಗುತ್ತವೆ. ಅಡಿಕೆ,ತೆಂಗು ಬೆಳೆಹಾನಿಯ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅಗತ್ಯ ದಾಖಲೆ ಮತ್ತು ಮಾಹಿತಿಯನ್ನು ಈ ಇಲಾಖೆಗಳು ಪಡೆಯಬೇಕು.
ಬೆಳೆಗಳ ನಷ್ಟಕ್ಕೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಮತ್ತು ಭತ್ತದ ಬೆಳೆ ಹಾನಿಯ ಪರಿಹಾರ ಮೊತ್ತ ಹೆಚ್ಚಿಸುವ ಬಗ್ಗೆ ಅಧಿವೇಶನದಲ್ಲಿ ಆಗ್ರಹಿಸಲಿದ್ದೇನೆ. ಉ.ಕ. ಜಿಲ್ಲಾಧಿಕಾರಿ ಗಳೊಂದಿಗೂ ಮಾತನಾಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.