ಯಲ್ಲಾಪುರ: ತಾಲ್ಲೂಕಿನ ಆರತಿಬೈಲ್ ಘಟ್ಟ ಹಾಗೂ ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂಣ ಹದಗೆಟ್ಟಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಈ ಕುರಿತು ಪ್ರಜಾವಾಣಿ ವಿಸ್ತ್ರತ ವರದಿಪ್ರಕಟಿಸಿತ್ತು. ಕೊನೆಗೂ ಎಚ್ಚೆತ್ತ ಇಲಾಖೆ ಹೆದ್ದಾರಿ ದುರಸ್ತಿಗೆ ಕ್ರಮ ಕೈಗೊಂಡಿದೆ.
ಯಲ್ಲಾಪುರ ವ್ಯಾಪ್ತಿಯ ಕಿರವತ್ತಿಯಿಂದ ಅರಬೈಲ್ವರೆಗೆ ಹೆದ್ದಾರಿಯನ್ನು ವರ್ಷದಲ್ಲಿ 2-3 ಬಾರಿ ನವೀಕರಣ, ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಆದರೂ ಕಳಪೆ ಕಾಮಾಗರಿಯಿಂದಲೋ ಅಥವಾ ಅಥಿ ಭಾರದ ವಾಹನ ಸಂಚಾರಿಂದಲೋ, ಹೆದ್ದಾರಿಯ ಮೇಲ್ಪದರು ಸಂಪೂರ್ಣ ಕಿತ್ತು ಹೋಗಿ, ವಾಹನ ಸವಾರರಿಗೆ ತೊಂದರೆ ಉಂಟಾಗುವುದು ಸಾಮಾನ್ಯವಾಗಿದೆ.
ಈ ಬಾರಿ ಆರತಿಬೈಲ್ ಹಾಗೂ ಅರಬೈಲ್ ಘಟ್ಟ ಪ್ರದೇಶದ ತಿರುವಿನಲ್ಲಿ ವ್ಯಾಪಕವಾಗಿ ರಸ್ತೆಯಲ್ಲಿ ಹೊಂಡ-ಗುಂಡಿಗಳು ತುಂಬಿದ್ದು ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಹೆದ್ದಾರಿ ನಿರ್ವಹಣೆಯ ಬಗ್ಗೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ತಿರುವಿನಲ್ಲಿ ಕೊರಕಲು ಉಂಟಾಗಿ ಬೈಕ್ ಸವಾರರು ಬೈಕ್ ಚಲಾಯಿಸಲು ಕಷ್ಟಪಡುವಂತಾಗಿತ್ತು.
ಕೊನೆಗೂ ಎಚ್ಚೆತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ಪಡೆದ ಕಂಪನಿಗೆ ಹೆದ್ದಾರಿ ಹಾಳಾಗಿರುವ ಪ್ರದೇಶದಲ್ಲಿ ಮರುಡಾಂಬರೀಕರಣಕ್ಕೆ ಸೂಚನೆ ನೀಡಿತ್ತು. ಗುತ್ತಿಗೆ ಪಡೆದ ಕಂಪನಿ ಕಳೆದ ಎರಡು ದಿನಗಳಿಂದ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.