ಭಟ್ಕಳ: ತಾಲ್ಲೂಕಿನಲ್ಲಿ ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಸೋನಾರಕೇರಿಯಲ್ಲಿ ಒಳಚರಂಡಿ ಛೇಂಬರ್ ಒಡೆದುಹೋಗಿ ಮಲಿನ ನೀರು ಬಾವಿಗೆ ಸೇರ್ಪಡೆಯಾಗಿ ಇಲ್ಲಿನ ನಿವಾಸಿಗಳು ಒಂದು ಕೊಡ ನೀರಿಗೂ ಪರದಾಡುವಂತಾಗಿದೆ.
ಜತೆಗೆ ಪಟ್ಟಣದ ಗೌಸಿಯಾ ಸ್ಟ್ರೀಟ್, ಮದೀನಾ ಕಾಲೊನಿ, ಮುರ್ಡೇಶ್ವರ, ಕಾಯ್ಕಿಣಿ, ಬೇಂಗ್ರೆ, ಬೈಲೂರು, ಬೆಳಕೆ, ಮಾವಿನಕುರ್ವೆ ಬಂದರ್, ಗುಳ್ಮಿ ಮುಂತಾದೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಪಣಗೊಂಡಿದ್ದು ಪ್ರತಿವರ್ಷ ಇಲ್ಲಿನ ಜನರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಕೆಲವು ಕಡೆ ನೀರಿನ ಕಾಮಗಾರಿ ನಡೆಯುತ್ತಿದ್ದರೂ ಮಂದಗತಿಯಲ್ಲಿ ಸಾಗುತ್ತಿದೆ. ತಕ್ಷಣ ನೀರಿನ ಅಭಾವ ಇರುವ ಗ್ರಾಮಗಳಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳುವುದರ ಜತೆಗೆ, ಸೋನಾರಕೇರಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ಸಮಸ್ಯೆಯನ್ನು ಸರಿಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ನೀರಿ ತೊಂದರೆ ಬಗೆಹರಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಕ್ರಾಂತಿ ಸಂಘದ ಪ್ರಮುಖರಾದ ಈರಾನಾಯ್ಕ, ಕುಮಾರ ನಾಯ್ಕ, ವೆಂಕಟೇಶ ನಾಯ್ಕ, ಅಶೋಕ ನಾಯ್ಕ, ಕೆ. ಎಂ ಶರೀಫ್, ಜೀವನ್ ನಾಯ್ಕ, ದೇವೇಂದ್ರ ನಾಯ್ಕ, ಸುರೇಶ ಎನ್. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.