ಗೋಕರ್ಣ: ಕೃಷಿಕ ವೃತ್ತಿ ಮಾಡುವ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬ ಈಚೆಗೆ ಸಂಭ್ರಮದಿಂದ ಮುಕ್ತಾಯಗೊಂಡಿತು.ಪಟ್ಟಣದಲ್ಲಿ ಹುಳಸೇಕೇರಿ ಮತ್ತು ಬಿಜ್ಜೂರು ಎಂಬ ಎರಡು ಪಂಗಡಗಳಿದ್ದು ಇಬ್ಬರೂ ಪ್ರತ್ಯೇಕವಾಗಿ ಸುಗ್ಗಿ ಹಬ್ಬ ಆಚರಿಸುವುದು ಹಲವು ವರ್ಷಗಳಿಂದ ಪರಂಪರಾಗತವಾಗಿ ರೂಢಿಯಲ್ಲಿ ನಡೆದು ಬಂದಿದೆ. ಒಂದು ದಿನದ ಹಿಂದೆ ಹುಳಸೇಕೇರಿಯವರ ಸುಗ್ಗಿ ಮುಕ್ತಾಯಗೊಂಡಿತ್ತು.
ಒಟ್ಟು 11 ಗ್ರಾಮಗಳನ್ನೊಳಗೊಂಡ ಬಿಜ್ಜೂರ ಸುಗ್ಗಿ ನೋಡಲು ಬಹಳ ಆಕರ್ಷಕ. ಸುಗ್ಗಿಗೆ ವಿವಿಧ ರೀತಿಯಲ್ಲಿ ಮೆರಗು ತಂದು ಕೊಡಲು ಸಾಧ್ಯವಾಗಿದೆ. ಸುಗ್ಗಿ ಪ್ರಾರಂಭವಾದ ಮೂರನೇ ದಿನ ಊರಿನ ರಥಬೀದಿಯಿಂದ ಮುಖ್ಯರಸ್ತೆಯಲ್ಲಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಜನರನ್ನು ಮನಸೂರೆಗೊಂಡವು. ಊರಿನ ಸಮಸ್ಯೆಗಳನ್ನು ಬಿಂಬಿಸುವ ಸ್ತಬ್ದ ಚಿತ್ರ, ಊಳುವ ನೇಗಿಲ ಯೋಗಿ ರೈತ, ನೆಲ ಬಿಟ್ಟು ನಿಂತ ಗಾಂಧೀಜಿ , ಬೆಳೆ ನಷ್ಟವಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಹೀಗೆ ಹಲವು ಬಗೆಯ ರೂಪಕಗಳು, ಜನಪದ ವೇಷಗಳು ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟವು. ಪ್ರತಿ ವರ್ಷ ಬರುವ ವಿದೇಶಿಗರೂ ರೈತನ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಹಾಲಕ್ಕಿ ಸಮುದಾಯದ ಸುಗ್ಗಿ ಕಾರ್ಯಕ್ರಮ ಜನರನ್ನು ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಯಿತು. ಜನರು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.
5 ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು .ಕೊನೆಯ ದಿನ ಯಜಮಾನ ಗೌಡನ ಮನೆತನದವರು ಕಲಶ ಹೊತ್ತು ಸಾಗುವ ಮೂಲಕ ಸುಗ್ಗಿಗೆ ಮುಕ್ತಾಯ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.