ADVERTISEMENT

‘ಜಿಲ್ಲೆಯ ಪರಿಸರ, ಸೌಂದರ್ಯ ಬೇರೆಲ್ಲೂ ಇಲ್ಲ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:52 IST
Last Updated 7 ಅಕ್ಟೋಬರ್ 2015, 6:52 IST

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಯುವಜನೋತ್ಸವವು ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರದಿಂದ ಆರಂಭವಾಗಿದೆ. 50 ಕಾಲೇಜುಗಳ ಸುಮಾರು 1500ರಷ್ಟು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತುರುಸಿನಿಂದ ಭಾಗವಹಿಸಿದ್ದಾರೆ.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಜನೋತ್ಸವ ಉದ್ಘಾಟಿಸಿದರು. ಮೊಬೈಲ್‌ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಪ್ರತಿಭೆ ಕಮರುತ್ತಿದೆ. ಮೊಬೈಲ್‌ ನಮ್ಮ ದೌರ್ಬಲ್ಯವನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನವನ್ನು ಅಗತ್ಯ ತಕ್ಕಷ್ಟು ಬಳಸಿಕೊಂಡು ವಿದ್ಯಾರ್ಥಿಗಳು ಭವಿಷ್ಯಕ್ಕೆ ಪೂರಕವಾಗುವ ಕ್ಷೇತ್ರದೆಡೆಗೆ ಗಮನ ಕೇಂದ್ರೀಕರಿಸಬೇಕು ಎಂದರು.

ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ ‘ಜಗತ್ತಿನ ಹತ್ತಾರು ದೇಶಗಳನ್ನು ಸುತ್ತಾಡಿ ಬಂದಿದ್ದೇನೆ. ಆದರೆ ಉತ್ತರ ಕನ್ನಡದ ಈ ಮಲೆನಾಡು ಪರಿಸರ ಹಾಗೂ ಸೌಂದರ್ಯವನ್ನು ಜಗತ್ತಿನ ಬೇರೆ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ. ಇಂತಹ ಪರಿಸರ ಸೂಕ್ಷ್ಮತೆಯ ಕೇಂದ್ರದಲ್ಲಿ ಅಷ್ಟೇ ಸರಳವಾಗಿ ಪ್ರತಿಯೊಬ್ಬರೂ ನಡೆಯಬೇಕು’ ಎಂದರು.

ಹಿಂದೂಸ್ತಾನಿ ಗಾಯನ, ಹಿಂದೂಸ್ತಾನಿ ವಾದನ, ತಾಳವಾದ್ಯ, ಸ್ವರ ವಾದ್ಯ, ಲಘು ಸಂಗೀತ, ಸಮೂಹ ಗಾಯನ, ಜನಪದ ವಾದ್ಯ, ಜನಪದ ನೃತ್ಯ, ಶಾಸ್ತ್ರೀಯ ನೃತ್ಯ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ, ಪ್ರಹಸನ, ಮೂಕಾಭಿನಯ, ಸ್ಥಳದಲ್ಲಿ ಚಿತ್ರ ಬಿಡಿಸುವುದು, ತೇಪೆ ಚಿತ್ರ, ರಂಗೋಲಿ, ಪೋಸ್ಟರ್‌ ಮೇಕಿಂಗ್, ಮಣ್ಣಿನ ಮೂರ್ತಿ ತಯಾರಿಕೆ, ಸೇರಿದಂತೆ 24 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಕುಮುದಾ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಜಿ.ಟಿ.ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.