ADVERTISEMENT

‘ಕೂರ್ಮಗಡ’ ಜಾತ್ರೆಗೆ ಹರಿದು ಬಂದ ಭಕ್ತಸಾಗರ!

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 10:07 IST
Last Updated 3 ಜನವರಿ 2018, 10:07 IST
ಕಾರವಾರ ಸಮೀಪದ ಅರಬ್ಬಿ ಸಮುದ್ರದ ಕೂರ್ಮಗಡ ದ್ವೀಪದಲ್ಲಿ ನಡೆದ ಜಾತ್ರೆಯಲ್ಲಿ ಮಂಗಳವಾರ ಭಾಗವಹಿಸಿ ನಗರಕ್ಕೆ ತೆರಳಲು ಬೋಟುಗಳಿಗಾಗಿ ಕಾಯುತ್ತ ದಡದಲ್ಲಿ ನಿಂತಿರುವ ಭಕ್ತರು
ಕಾರವಾರ ಸಮೀಪದ ಅರಬ್ಬಿ ಸಮುದ್ರದ ಕೂರ್ಮಗಡ ದ್ವೀಪದಲ್ಲಿ ನಡೆದ ಜಾತ್ರೆಯಲ್ಲಿ ಮಂಗಳವಾರ ಭಾಗವಹಿಸಿ ನಗರಕ್ಕೆ ತೆರಳಲು ಬೋಟುಗಳಿಗಾಗಿ ಕಾಯುತ್ತ ದಡದಲ್ಲಿ ನಿಂತಿರುವ ಭಕ್ತರು   

ಕಾರವಾರ: ಇಲ್ಲಿನ ಸಮೀಪದ ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪದಲ್ಲಿ ಮಂಗಳವಾರ ನರಸಿಂಹ ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಪುಷ್ಯ ಮಾಸದ ಪೂರ್ಣಚಂದ್ರ ದಿನದಂದು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಹಸ್ರಾರು ಜನ ಸಾಕ್ಷಿಯಾದರು. ಫಲ, ಪುಷ್ಪಗಳಿಂದ ಅಲಂಕೃತಗೊಂಡಿದ್ದ ದೋಣಿಯಲ್ಲಿ ಬೆಳಿಗ್ಗೆ ಕೋಡಿಬಾಗದಿಂದ ನರಸಿಂಹ ದೇವರನ್ನು ಕೂರ್ಮಗಡಕ್ಕೆ ಕರೆತರಲಾಯಿತು. ದ್ವೀಪದ ಮೇಲಿನ ಚಿಕ್ಕ ಗುಡಿಯಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ವಿಶೇಷ ಪೂಜೆಗಳು ನಡೆದವು.

ಬಾಳೆಗೊನೆ ಅರ್ಪಣೆ: ಇಲ್ಲಿಗೆ ನೆರೆಯ ರಾಜ್ಯಗಳಾದ ಗೊವಾ, ಮಹಾರಾಷ್ಟ್ರ, ಉತ್ತರ ಕರ್ನಾಟಕದ ಕೆಲವು ಭಾಗಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ವಿಶೇಷವಾಗಿ ಇಲ್ಲಿ ಬಾಳೆಗೊನೆಯನ್ನು ಹರಕೆ ಹೊರಲಾಗುತ್ತದೆ. ಹೀಗಾಗಿ ಹರಕೆ ಹೊತ್ತ ಭಕ್ತರು ಬಾಳೆಗೊನೆ ಅರ್ಪಿಸಿ ಪೂಜೆ ಸಲ್ಲಿಸಿದರು.

ಸಮುದ್ರದಲ್ಲಿ ದೋಣಿಗಳ ಮೆರವಣಿಗೆ: ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ನೂರಾರು ಮೀನುಗಾರಿಕಾ ಬೋಟುಗಳು ಬೆಳಗ್ಗಿನಿಂದಲೇ ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪಕ್ಕೆ ಯಾತ್ರೆ ಬೆಳೆಸಿದ್ದವು. ಮೀನುಗಾರರು ಕುಟುಂಬ ಸಮೇತರಾಗಿ ತಮ್ಮ ಬೋಟಿನಲ್ಲಿ ದ್ವೀಪಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ಪ್ರಯಾಣದ ನಡುವೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇತರೆ ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಕೋಡಿಬಾಗ ಹಾಗೂ ಬೈತ್‌ಖೋಲ್‌ದಲ್ಲಿ ಬೋಟುಗಳ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಉಚಿತ ನೀರು ವಿತರಣೆ: ದೇವಸ್ಥಾನ ಗುಡ್ಡದ ಮೇಲಿರುವುದರಿಂದ ಅದನ್ನು ಏರುವವರಿಗೆ ಉಂಟಾಗುವ ದಾಹವನ್ನು ತಣಿಸಲು ಹೋಗುವ ದಾರಿಯಲ್ಲಿ ಸತ್ಯಸಾಯಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದವು. ದಾರಿ ಮಧ್ಯೆ ಅಲ್ಲಲ್ಲಿ ನಿಂತಿದ್ದ ಸ್ವಯಂ ಸೇವಕರು ಭಕ್ತರಿಗೆ ಕುಡಿಯಲು ನೀರಿನ ಜತೆ ಬೆಲ್ಲವನ್ನೂ ನೀಡಿ ಸತ್ಕರಿಸಿದರು.

ದ್ವೀಪದಲ್ಲೇ ಊಟ, ಉಪಹಾರ: ಜಾತ್ರೆಯು ದ್ವೀಪದಲ್ಲಿ ನಡೆಯುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಲ್ಲಿ ಹೆಚ್ಚಿನವರು ಪೂಜಾ ಸಾಮಗ್ರಿಯೊಂದಿಗೆ ಪಾಯಸ, ಸಿಹಿ ತಿನಿಸುಗಳನ್ನು ಸಹ ತಂದಿದ್ದರು. ಮಧ್ಯಾಹ್ನದ ಹೊತ್ತಿಗೆ ದ್ವೀಪದ ದಡದಲ್ಲಿ ಭಕ್ತರು ಊಟ, ಉಪಾಹಾರ ಸೇವಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ತಂಪು ಪಾನೀಯಗಳ ಅಂಗಡಿ ಹಾಗೂ ಸಿಹಿ ತಿಂಡಿಗಳ ಮಳಿಗೆಗಳತ್ತ ಜನರು ಮುಗಿಬಿದ್ದಿದ್ದರು.

‘ವರ್ಷಕ್ಕೊಮೆ ಈ ಜಾತ್ರೆ ನಡೆಯುತ್ತದೆ. ಅದು ದ್ವೀಪದಲ್ಲಿ ನಡೆಯುವುದು ವಿಶೇಷ. ಹೆಚ್ಚಿನ ನರಸಿಂಹ ದೇವರಿಗೆ ಬಾಳೆಗೊನೆ ಅರ್ಪಿಸಿ ಹರಕೆ ತೀರಿಸುವರು. ಇಲ್ಲಿಗೆ ದೋಣಿಯಲ್ಲಿ ಬರುವುದೇ ಒಂದು ರೋಮಾಂಚನಕಾರಿ’ ಗೋವಾದ ರವಿ ಪೂಜಾರಿ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

* * 

ಕೂರ್ಮಗಡ ದ್ವೀಪದಲ್ಲಿ ವರ್ಷಕ್ಕೊಮ್ಮೆ ನಡೆಯುುವ ಈ ಜಾತ್ರೆಗೆ ದೋಣಿಗಳಲ್ಲಿ ಬರುವುದೇ ತುಂಬಾ ಖುಷಿ ಕೊಡುತ್ತದೆ.
–ವಿಶಾಲ್ ಹರಿಕಂತ್ರ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.