ಇಂಡಿ: ‘ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ, ಗುಣಾತ್ಮಕ ಫಲಿತಾಂಶ ಸಿಗುತ್ತದೆ. ಇದರಲ್ಲಿ ತಂದೆ–ತಾಯಿ ಮತ್ತು ಶಿಕ್ಷಕರ ಪಾತ್ರ ಹೆಚ್ಚು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಗಳ ಶೈಕ್ಷಣಿಕ ಚಿಂತನಾಗೋಷ್ಠಿ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶಿಕ್ಷಣದ ಜತೆಜತೆಗೆ ವಿದ್ಯಾರ್ಥಿ ಗಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ’ ಎಂದರು.
‘ಸರ್ಕಾರ ಶಿಕ್ಷಣ ಕ್ಷೇತ್ರಕ್ಕಾಗಿ ₹17 ಸಾವಿರ ಕೋಟಿ ಮೀಸಲಿಟ್ಟಿದೆ. ಆದರೂ ಶಿಕ್ಷಣದಲ್ಲಿ ಹೇಳಿಕೊಳ್ಳುವಂತಹ ಅಂತಹ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕಿ, ಪರಿಹಾರ ಕಂಡುಕೊಳ್ಳ ಬೇಕಿದೆ’ ಎಂದು ಹೇಳಿದರು.
ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, ‘ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಇನ್ನೂ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ, ‘ಶಿಕ್ಷಕರ ಸಮಸ್ಯೆಗಳೇನೇ ಇದ್ದರೂ ಸರ್ಕಾರದ ಗಮನಕ್ಕೆ ತನ್ನಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ. ತಳಕೇರಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ರುಕ್ಮುದ್ದೀನ ತದ್ದೇವಾಡಿ, ಜಿ.ಪಂ. ಸದಸ್ಯರಾದ ಹಣಮಂತ ಖಂಡೇಕಾರ, ಸುಭಾಸ ಕಲ್ಲೂರ, ಜಿಲ್ಲಾ ಸಾ.ಶಿ.ಇ. ಇಲಾಖೆಯ ಡಿ.ವೈ.ಎಫ್.ಸಿ. ಎಂ.ಸಿ. ದೇವಣಗಾಂವ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ವಾಲಿಕಾರ ಹಾಗೂ ದೈಹಿಕ ಶಿಕ್ಷಣಾ ಧಿಕಾರಿ ಎ.ಬಿ. ಕವಲಗಿ ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಎ.ಸಿ. ಆಳೂರ ನಿರೂಪಿಸಿದರು. ಎ.ಬಿ. ಕವಲಗಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.