ದೇವರಹಿಪ್ಪರಗಿ: ‘ಜನಪರ, ದಕ್ಷ ಆಡಳಿತಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಬೆಂಬಲಿಸುವಂತೆ’ ಕೋರಿ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಜರುಗಿತು.
ಗುರುವಾರ ಸಂಜೆ ಪಟ್ಟಣದ ಕರಿದೇವರ ದೇವಸ್ಥಾನದ ಮೂಲಕ ಆರಂಭಗೊಂಡ ರ್ಯಾಲಿ ಬೇವಿನಕಟ್ಟಿ, ಪತ್ತಾರ ಕಟ್ಟೆ, ಚಾವಡಿ, ಮೇನ್ ಬಜಾರ್ ಹಾದು ತಾಳಿಕೋಟೆ ರಸ್ತೆಯ ಮೂಲಕ ಹೊಸನಗರದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಸಾಗಿತು. ಅಲ್ಲಿಂದ ಮರಳಿ ಮೊಹರೆ ಹನುಮಂತರಾಯ ವೃತ್ತಕ್ಕೆ ಬಂದು ಬಸ್ ನಿಲ್ದಾಣ, ಪೊಲಿಸ್ ಠಾಣೆಯ ಮೂಲಕ ಹಾಯ್ದು ಡಾ.ಅಂಬೇಡ್ಕರ್ ವೃತ್ತ ತಲುಪಿತು.
ಬೈಕ್ ರ್ಯಾಲಿ ಉದ್ಘಾಟಿಸಿದ ದೇವರ ಹಿಪ್ಪರಗಿ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಹಿರಿಯ ಧುರೀಣ ಆರ್.ಆರ್.ನಾಯಿಕ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದ್ದು, ಪಕ್ಷಕ್ಕೆ ಈ ಯುವ ಸಮೂಹವೇ ಬಂಡವಾಳ’ ಎಂದರು.
‘ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು. ಪ್ರಧಾನಿ ಮೋದಿಯವರ ಕನಸು ನನಸಾಗಲು ಪ್ರತಿಯೊಬ್ಬ ಕನ್ನಡಿಗ ಬಿಜೆಪಿಗೆ ಮತ ನೀಡಬೇಕು. ನೀವು ನೀಡಿದ ಪ್ರತಿಯೊಂದು ಮತ ಪ್ರಧಾನಿ ಮೋದಿಗೆ ನೀಡಿದಂತೆ. ಈ ನಿಟ್ಟಿನಲ್ಲಿ ಯುವಕರು ಚುನಾವಣೆ ಮುಗಿಯುವವರೆಗೆ ಮನೆಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು. ಜೊತೆಗೆ ಮತದಾರರನ್ನು ಸೆಳೆಯುವ ಕಾರ್ಯ ನಡೆಯಬೇಕು’ ಎಂದರು.
ಬೈಕ್ ರ್ಯಾಲಿಯಲ್ಲಿ ಕಾರ್ಯಕ್ರಮ ಸಂಘಟಕ ಹಾಗೂ ಯುವ ಮೋರ್ಚಾ ಅಧ್ಯಕ್ಷ ರಮೇಶ ಮಸಬಿನಾಳ, ಇಂಗಳೇಶ್ವರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಲಪ್ಪ ಮಟ್ಟಿ, ಶಂಕರಗೌಡ ಕೋಟಿಖಾನಿ, ರಾಜು ಮೆಟಗಾರ, ಮಡುಗೌಡ ಬಿರಾದಾರ, ಮಹಾಂತೇಶ ವಂದಾಲ, ದಿನೇಶ ಪಾಟೀಲ, ನಾಗೇಂದ್ರ ಇಂಡಿ, ರಾವುತ ಅಗಸರ, ಶಿವು ಯಾಳಗಿ ಅಣ್ಣುಗೌಡ ಪಾಟೀಲ , ವಿಜಯಕುಮಾರ ಹಿರೇಮಠ, ಮಾಂತೇಶ ಮುತ್ತಗಿ, ಸೇರಿದಂತೆ ಮತಕ್ಷೇತ್ರದ ವಿವಿಧ ಗ್ರಾಮಗಳ ಯುವಕರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.