ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದುಕಿನ ಭದ್ರತೆಯ ಹಕ್ಕನ್ನು ಹೊಂದಿರುತ್ತಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರರಾವ ಹೇಳಿದರು.
ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳ ಮತ್ತು ಅಪರಾದ ತಡೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನವು ವಿಶ್ವಕ್ಕೆ ವೈಶಿಷ್ಟ ಮತ್ತು ಪರಿಪೂರ್ಣವಾದದ್ದಾಗಿದೆ ಎಂದರು.
ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನದಲ್ಲಿ ಒದಗಿಸಿರುವ ಹಕ್ಕುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಬದುಕಿನ ದೃಷ್ಟಿಯಿಂದ ನಾಗರಿಕರು ಆರೋಗ್ಯಪೂರ್ಣ ಜೀವನ ರೂಪಿಸಿಕೊಳ್ಳಲು ರಾಷ್ಟ್ರದ ಪರಸ್ಪರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಅಪರಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಹಕಾರಿಸಿದ್ದಲ್ಲಿ ಅಪರಾದ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಡಿಎಸ್ಪಿ ಡಿ.ಅಶೋಕ ಮಾತನಾಡಿ, ಸಮಾಜದಲ್ಲಿ ಪೊಲೀಸರು ಅಪರಾದ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಹಲವಾರು ಅಪರಾದ ಪ್ರಕರಣಗಳು ನಡೆಯುತ್ತಿದ್ದು, ಇದರ ಕಡಿವಾಣಕ್ಕೆ ಸಾರ್ವಜನಿಕರ ತಮ್ಮ ಕಾರ್ಯಕ್ಕೆ ಸಹಾಯ ಮಾಡಬೇಕು ಎಂದರು.
ನಿವೃತ್ತ ಡಿಎಸ್ಪಿ ಬಿ.ಪಿ.ಹುಲಸಗುಂದ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಎಸ್. ಗಾಳಿ, ಬಂಡೆಪ್ಪ ತೇಲಿ ಮಾತನಾಡಿದರು. ಪ್ರಾಚಾರ್ಯೆ ಜಯಶೀಲಾ ನಾವದಗಿ ಅಧ್ಯಕ್ಷತೆ ವಹಿಸಿದ್ದರು.
ಜಗದೀಶ ಬಿರಾದಾರ, ಆರ್.ಎಸ್.ಬಿರಾದಾರ, ಎನ್.ಎಸ್.ಮಡಗೊಂಡ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಎಸ್.ಬಿ.ಕಾಮಗೊಂಡ ಸ್ವಾಗತಿಸಿದರು. ಎಸ್.ಪಿ.ಶೇಗುಣಸಿ ನಿರೂಪಿಸಿದರು. ಶ್ರೀಶೈಲ ತೇಲಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.