ADVERTISEMENT

ಮನ ತಣಿಸಿದ ಅಂಬಯ್ಯ ವಚನ ಗಾಯನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:25 IST
Last Updated 21 ಜನವರಿ 2017, 5:25 IST
ಮನ ತಣಿಸಿದ ಅಂಬಯ್ಯ  ವಚನ ಗಾಯನ
ಮನ ತಣಿಸಿದ ಅಂಬಯ್ಯ ವಚನ ಗಾಯನ   

ನಿಡಗುಂದಿ: ಬಸವ, ಅಲ್ಲಮ ಸೇರಿದಂತೆ 12ನೇ ಶತಮಾನದ ಶರಣ ವಚನಗಳನ್ನು ತಮ್ಮ ಕಂಚಿನ ಕಂಠದಿಂದ ವಚನ ಗಾಯನವನ್ನು ಪ್ರಸ್ತುತಪಡಿಸಿದ ಖ್ಯಾತ ಸಂಗೀತಗಾರ ಅಂಬಯ್ಯ ನುಲಿ ಸುಮಾರು ಎರಡು ಗಂಟೆಗಳ ಕಾಲ ಶ್ರೋತೃಗಳನ್ನು ವಚನದ ಆಲಾಪದಲ್ಲಿ ಮುಳುಗಿಸಿದರು.

ಸ್ಥಳೀಯ ಕ್ರಿಯಾಶೀಲವಾಗಿರುವ ಗೆಳೆಯರ ಬಳಗ ಪಟ್ಟಣದ ಜಿವಿವಿಎಸ್ ಕಾಲೇಜು ಆವರಣದ ಪವಾಡ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅಂಬಯ್ಯ ನುಲಿ  ವಚನಗಾಯನ ಪ್ರಸ್ತುತಪಡಿಸಿದರು.

ತಮ್ಮದೇ ಆದ ರಾಗ ಸಂಯೋಜನೆಯೊಂದಿಗೆ 12 ನೇ ಶತಮಾನದ ಅಣ್ಣ ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಕನಕದಾಸರ ವಚನಗಳನ್ನು ಅದ್ಭುತವಾಗಿ ಹಾಡಿ ಗಮನಸೆಳೆದರು.

‘ಏನಾದರೂ ಆಗು ಮೊದಲು ಮಾನವ ನಾಗು’, ‘ಪರಮ ಪದವಿ ನಿಮ್ಮ ಕೊರಳಲ್ಲಿ ಕಟ್ಟು ಕೊಳ್ಳಿ, ಪರಮ ಪದವಿ ನಿಮ್ಮಿ ತಲೆಯಲ್ಲಿ ಹೊತ್ತು ಕೊಳ್ಳಿ’, ‘ಬಡವನಾದರೇ ಉಣ್ಣುವ ಚಿಂತೆ, ಉಂಡರೇ ಉಡುವ ಚಿಂತೆ’, ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ’, ‘ಆಡಿ ಕಾಲು ದಣಿದವು ನೋಡಿ ಕಣ್ಣು ದಣಿದವು’ ಎಂಬ ತತ್ವಗಳನ್ನು ಸಾರುವ ಹಲವಾರು ವಚನಗಳನ್ನು ಹಾಡಿದ ಅಂಬಯ್ಯ ನುಲಿ, ಅವುಗಳ ಮೂಲಕ ಶೋತೃಗಳನ್ನು ಆಧ್ಯಾತ್ಮದ ಚಿಂತೆಗೆ ಹಚ್ಚಿದರು.

ಕೊನೆಗೆ ‘ನಿನ್ನ ಮಗನದುಡುವ ಚೆಂದವೇನೆ ಗೋಪಿ’ ಎಂದು ಪುರಂದರದಾಸರ ಹಾಡನ್ನು ಹಾಡಿ ಭಕ್ತಿ ಗೀತೆಯೊಂದಿಗೆ ತಮ್ಮ ವಚನ ಗಾಯನವನ್ನು ಮುಗಿಸಿದರು.
ಅವರ ರಾಗ, ಕಂಠ, ಹಾಡುವ ಶೈಲಿ, ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಸಂಗೀತದ ಮೂಲಕ ಶರಣರ ವಚನಗಳನ್ನು ಜನರಿಗೆ ತಲುಪಿಸುವ ಕ್ರಿಯೆಯಲ್ಲಿ ತೊಡಗಿರುವ ಅಂಬಯ್ಯ ನುಲಿ ತಮ್ಮ ಕಂಚಿನ ಕಂಠದಿಂದ ಲಘು ಶಾಸ್ತ್ರೀಯ ಸಂಗೀತದಿಂದ ವಚನ ಸಂಗೀತಕ್ಕೆ ಅಮೋಘ ಪರಂಪರೆಯನ್ನು ಬರೆದುಕೊಟ್ಟ ಅವರ ಹಾಡುಗಳು ಜನತೆಯನ್ನು ವಚನ ಸಂಗೀತದೆಡೆ ವಾಲುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.