ವಿಜಯಪುರ: ‘ಸೈನಿಕರೇ ನಮ್ಮ ನಿಜ ವಾದ ಹೀರೋಗಳು, ಅವರ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಯುವ ಭಾರತ ಸಂಘಟನೆ ಅಧ್ಯಕ್ಷ ಉಮೇಶ ಕಾರಜೋಳ ಹೇಳಿದರು. ನಗರದ ಸಿದ್ಧೇಶ್ವರ ರಸ್ತೆಯ ಕಿರಾಣಾ ಬಜಾರ ಸಮೀಪ ಯುವ ಬ್ರಿಗೇಡ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 18ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದೇಶದ ಗಡಿ ಕಾಯುವ ಸೈನಿಕ ರನ್ನು ಪ್ರೀತಿ, ಗೌರವದಿಂದ ಕಾಣುವ ಮೂಲಕ ಆತ್ಮಸ್ಥೈರ್ಯ ಇಮ್ಮಡಿಗೊಳಿ ಸಬೇಕು’ ಎಂದರು.
‘1999ರ ಜುಲೈ 26ರಂದು ದಿಟ್ಟತನದಿಂದ ಹೋರಾಟ ನಡೆಸಿದ ಭಾರತೀಯ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದರು. ಈ ಯುದ್ಧದಲ್ಲಿ ಹಲವು ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅಂದಿನ ಪ್ರಧಾನಿ ಅಟಲ್ಜಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಗಟ್ಟಿ ನಿರ್ಧಾರಗಳು ಸೈನಿಕರಲ್ಲಿ ಧೈರ್ಯ ತುಂಬಿತು’ ಎಂದು ತಿಳಿಸಿದರು.
ಇದೇ ವೇಳೆ 1971ರ ಇಂಡೋ–-ಬಾಂಗ್ಲಾ ಯುದ್ಧದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಅಬ್ದುಲ್ ಹಮೀದ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ವಿನೋದಕುಮಾರ ಮಣೂರ, ಸತೀಶ ಭಾಗಿ, ವೀರೇಶ ಗೊಬ್ಬೂರ, ಸಾಗರ ಗಾಯಕವಾಡ, ಗಿರೀಶ ಕುಲಕರ್ಣಿ, ಈಸು ತೆಲಸಂಗ, ಆನಂದ ಡಿಂಗ್ರೆ, ಶ್ರೀಶೈಲ ಗೆರಡೆ, ಶ್ರೀಕಾಂತ ಅವಟಿ, ಅನೀಲ ಧನಶ್ರೀ ಉಪಸ್ಥಿತರಿದ್ದರು.
ಸೈನಿಕ ಶಾಲೆ: ವಿಜಯಪುರದ ಸೈನಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಹುತಾತ್ಮ ಸ್ಮಾರಕಕ್ಕೆ ಪುಷ್ಪ ಗುಚ್ಚವನಿಟ್ಟು ಹುತಾತ್ಮ ಯೋಧರನ್ನು ಸ್ಮರಿಸಲಾಯಿತು. ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್, ಉಪ ಪ್ರಾಚಾರ್ಯ ಸ್ಕ್ವಾಡರ್ನ್ ಲೀಡರ್ ಕೆ.ಜೆ.ಎಂ.ರೆಡ್ಡಿ, ಆಡಳಿತಾಧಿಕಾರಿ ಸ್ಕ್ವಾಡರ್ನ್ ಲೀಡರ್ ಎ.ಮುರುಳೀಧರನ್, ಮುಖ್ಯಶಿಕ್ಷಕ ಜಿ.ಶ್ರೀರಾಮ ಮೂರ್ತಿ, ನಿವೃತ್ತ ಸೇನಾ ಧಿಕಾರಿ ಕರ್ನಲ್ ಮೇಜರ್ ಡಿ.ಎಚ್. ಹೂಗಾರ್ ಸೇರಿದಂತೆ ನಿವೃತ್ತ ಸೈನಿಕರು ಸ್ಮಾರಕಕ್ಕೆ ಪುಷ್ಪಗುಚ್ಚವನ್ನಿಟ್ಟು ಹುತಾತ್ಮ ಸೈನಿಕರನ್ನು ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.