ADVERTISEMENT

‘ದೋಷ ಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಿ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 7:19 IST
Last Updated 23 ಜನವರಿ 2018, 7:19 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಚುನಾವಣಾ ವೀಕ್ಷಕ ಪಿ.ಮಣಿವಣ್ಣನ್ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿ.ಪಂ. ಸಿಇಒ ಎಂ.ಸುಂದರೇಶಬಾಬು, ಬಸನಗೌಡ ಪಾಟೀಲ ಯತ್ನಾಳ, ಶಾಸಕ ರಮೇಶ ಭೂಸನೂರ ಇದ್ದಾರೆ
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಚುನಾವಣಾ ವೀಕ್ಷಕ ಪಿ.ಮಣಿವಣ್ಣನ್ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿ.ಪಂ. ಸಿಇಒ ಎಂ.ಸುಂದರೇಶಬಾಬು, ಬಸನಗೌಡ ಪಾಟೀಲ ಯತ್ನಾಳ, ಶಾಸಕ ರಮೇಶ ಭೂಸನೂರ ಇದ್ದಾರೆ   

ವಿಜಯಪುರ: ‘ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಲು ಅನುಕೂಲವಾ ಗುವಂತೆ ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸುವಂತೆ’ ವಿಧಾನಸಭಾ ಚುನಾವಣಾ ವೀಕ್ಷಕ ಪಿ.ಮಣಿವಣ್ಣನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ದೋಷ ರಹಿತ ಮತದಾರರ ಪಟ್ಟಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ ಎರಡು ವಾರದ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿ’ ಎಂದು ಸೂಚಿಸಿದರು.

‘ಉಪ ವಿಭಾಗಾಧಿಕಾರಿಗಳು, ತಹ ಶೀಲ್ದಾರರು ಹಾಗೂ ಚುನಾವಣೆಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸ ಬೇಕು. ಸರಿಯಾಗಿ ಕಾರ್ಯ ನಿರ್ವಹಿಸದ ಮತಗಟ್ಟೆ ಅಧಿಕಾರಿಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ಗಂಭೀರ ಲೋಪಕ್ಕೆ ಸೂಕ್ತ ಕ್ರಮ ಜರುಗಿಸಲು ಅವ ಕಾಶವಿದೆ. ಇದಕ್ಕೆ ಅವಕಾಶ ನೀಡಬೇಡಿ.

ADVERTISEMENT

ಮುನ್ನೆಚ್ಚರಿಕೆ ವಹಿಸಿ. ವಲಸೆ ಹೋಗಿರುವ, ಮೃತಪಟ್ಟಿರುವ, ಆರು ತಿಂಗಳಿಗೂ ಮೇಲ್ಪಟ್ಟು ಕೇಂದ್ರ ಸ್ಥಾನದಿಂದ ಹೊರಗುಳಿದಿರುವ ಮತದಾರರ ಬಗ್ಗೆ ಸೂಕ್ತ ಪರಿಷ್ಕರಣೆ ಯೊಂದಿಗೆ ವ್ಯವಸ್ಥಿತ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ’ ಎಂದು ತಿಳಿಸಿದರು.

‘ಗಂಭೀರ ಪ್ರಮಾಣದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೆರವನ್ನು ಪಡೆಯಿರಿ. ಕಾನೂನಿಗನ್ವಯ ಚುನಾವಣೆ ನಡೆಸಲು ಪ್ರಥಮ ಆದ್ಯತೆಯನ್ನು ನಿಯೋಜಿಸಿದ ಎಲ್ಲ ಅಧಿಕಾರಿಗಳು ನೀಡಬೇಕು’ ಎಂದು ಖಡಕ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದ ರೇಶಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕುಲದೀಪ್‌ಕುಮಾರ್‌ ಆರ್‌ ಜೈನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಮಹ್ಮದ್ ಇಕ್ರಾಮುಲ್ಲಾ ಶರೀಫ್, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸೂಕ್ತ ಪರಿಶೀಲನೆ

‘ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವ್ಯಕ್ತಪಡಿಸುವ ದೂರು, -ಸಲಹೆಗಳಿಗೆ ಸೂಕ್ತ ಪರಿಶೀಲನೆಯೊಂದಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಚುನಾ ವಣಾ ವೀಕ್ಷಕ ಪಿ.ಮಣಿವಣ್ಣನ್ ತಿಳಿಸಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು, ಇತರೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜನಪ್ರತಿನಿಧಿಗಳಿಂದ ಮತದಾರರ ಪಟ್ಟಿ ತಿದ್ದುಪಡಿಗೆ ಸಂಬಂಧಪಟ್ಟಂತೆ ದೂರು–-ಸಲಹೆಗಳು ಬಂದಿದ್ದು, ಸೂಕ್ತ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯುವುದು, ವರ್ಗಾವಣೆ ಮಾಡುವುದು, ನಕಲಿ ಮತದಾರರಿದ್ದರೆ ಕೈ ಬಿಡುವುದು, ಮತಗಟ್ಟೆ ಸ್ಥಾಪನೆ ಸೇರಿದಂತೆ ಪ್ರತಿಯೊಂದು ವಿಷಯ ವನ್ನು ಗಂಭೀರ ರೀತಿಯಿಂದ ಪರಿಶೀಲಿಸ ಲಾಗುವುದು. ಪ್ರತಿಯೊಬ್ಬ ಮತದಾರರು ಅಮೂಲ್ಯವಾಗಿದ್ದು, ಅವರ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ಸಿಂದಗಿ ಶಾಸಕ ರಮೇಶ ಭೂಸನೂರ, ಅಫ್ತಾಬ್‌ ಖಾದ್ರಿ ಮತದಾರರ ಪಟ್ಟಿಯಲ್ಲಿರುವ ದೋಷಗಳ ಹಾಗೂ ಮತಗಟ್ಟೆಗಳ ಸ್ಥಾಪನೆ ಕುರಿತಂತೆ ಸಲಹೆ ನೀಡಿದರು.

ಅನಿರೀಕ್ಷಿತ ಭೇಟಿ; ಪರಿಶೀಲನೆ

ವಿಜಯಪುರ ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಚುನಾವಣಾ ವೀಕ್ಷಕ ಪಿ.ಮಣಿವಣ್ಣನ್‌ ಸೋಮವಾರ ದಿಢೀರ್‌ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲಿಸಿದರು.

ಅರ್ಜುಣಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಭೇಟಿ ನೀಡಿ, ದೋಷ ರಹಿತ ಮತದಾರರ ಪಟ್ಟಿ ರೂಪಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಬಬಲೇಶ್ವರದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿರುವ ದೋಷಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿಜಯಪುರದ ಇಬ್ರಾಹಿಂ ರೋಜಾ ಪಕ್ಕದಲ್ಲಿರುವ ಬಡಾವಣೆಯ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ಆ ಕುಟುಂಬದ ಹೆಸರಿರುವ ಬಗ್ಗೆ, ಹೆಸರು ಕಡಿತಗೊಳಿಸಿರುವ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದರು.

ಉಪ ವಿಭಾಗಾಧಿಕಾರಿ ಡಾ.ಶಂಕರ ವಣಕ್ಯಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾದೇವ ಮುರಗಿ, ತಹಶೀಲ್ದಾರ್ ಎಂ.ಎನ್.ಬಳಿಗಾರ ಈ ಸಂದರ್ಭ ಉಪಸ್ಥಿತರಿದ್ದರು.

ಮಾನವ ಸರಪಳಿ

ಮತದಾರರ ಪಟ್ಟಿ ನೋಂದಣಿ, ಪರಿಷ್ಕರಣೆಯ ಕೊನೆ ದಿನದ ಅಂಗವಾಗಿ ಜ 22ರ ಸೋಮವಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯಿತಿ ಸಿಇಓ ಎಂ.ಸುಂದರೇಶಬಾಬು ನೇತೃತ್ವದಲ್ಲಿ, ನಗರದ ಗಾಂಧಿ ವೃತ್ತ, ಶಿವಾಜಿ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.

ಶಾಲಾ ಕಾಲೇಜುಗಳ 2000 ವಿದ್ಯಾರ್ಥಿಗಳ ಸಹಯೋಗದೊಂದಿಗೆ ಮಾನವ ಸರಪಳಿ ನಿರ್ಮಿಸಿ, ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಯಿತು. ಎಂ.ಸುಂದರೇಶಬಾಬು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಉಪಸ್ಥಿತರಿದ್ದರು.

ಸಹಾಯವಾಣಿ

ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದೂರು–-ಸಲಹೆಗಳನ್ನು ನೀಡಲು ವಿಜಯಪುರ ಉಪ ವಿಭಾಗಾಧಿಕಾರಿ ಕಾರ್ಯಾಲಯ ದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.

08352–-278285 (ಇ ಮೇಲ್: acbijapur@gmail.com)ಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸುವಂತೆ ಮತದಾರರ ನೊಂದಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* * 

ನ್ಯಾಯಸಮ್ಮತ ಚುನಾ ವಣೆಗಾಗಿ ಆಯೋಗ ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ತಪ್ಪು ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಪಿ.ಮಣಿವಣ್ಣನ್‌, ಚುನಾವಣಾ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.