ಕಕ್ಕೇರಾ: ‘15 ದಿನಗಳಿಂದ ಮೋಡ ತುಂಬಿ ತುಳುಕುತೈತ್ರೀ, ಆದರೆ ಮಳೆ ಮಾತ್ರ ಬರವಲ್ಲದು ಹೀಗೆ ಆದರೆ ನಮ್ಮ ಬೆಳೆಗೆ ಇನ್ನೇಲ್ಲಿ ಬೆಲೆ ಬರುವುದ್ರಿ, ಹಿಂಗಾದ್ರ ಜೀವನ ಸಾಗಿಸುವುದು ಕಷ್ಟರೀ’ ಇದು ಬೆಣಸಿಗಡ್ಡಿಯ ರೈತ ಅಮರೇಶ ಅವರ ಮಾತು. ಪಟ್ಟಣದ ಸುತ್ತ ಮುತ್ತಲಿನ ರೈತರು ಬೆಳೆದ ಹತ್ತಿ, ತೊಗರಿ, ಶೇಂಗಾ, ಇನ್ನು ಮುಂತಾದ ಬೆಳೆಗಳನ್ನು ಬಿತ್ತಿ ಮಳೆಯಿಲ್ಲದೆ ಕಂಗಾಲಾಗಿದ್ದಾರೆ.
ಜೂನ್ ತಿಂಗಳಲ್ಲಿ ಅಲ್ಪಸ್ವಲ್ಪ ಮುಂಗಾರು ಮಳೆಯಾಗಿದ್ದು, ಜಮೀನು ಸ್ವಲ್ಪ ಹಸಿಯಿದ್ದಾಗ ಹದ ಮಾಡಿದ ಪರಿಣಾಮ ಬೆಳೆಗಳು ಮೊಳಕೆಯೊಡೆದಿದ್ದವು. ಆದರೆ ಅರ್ಧದಷ್ಟು ಬೆಳೆಗಳು ಈಗಾಗಲೇ ಒಣಗುತ್ತಿವೆ. ‘ಸದ್ಯಕ್ಕೆ ಮಳೆಯಾಗದಿದ್ದಲ್ಲಿ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುತ್ತವೆ’ ಎಂದು ಅಮರಪ್ಪ ನೀಲಕಂಠರಾಯಗಡ್ಡಿಯ ರೈತ ಹೇಳಿದರು.
‘ಕಳೆದ ಬಾರಿ ಸಂಪೂರ್ಣವಾಗಿ ಬೆಳೆಗಳು ಕಾಲುವೆ ನೀರಿಲ್ಲದೆ ಒಣಗಿದ್ದವು. ಈಗ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ನೀರು ತುಂಬಿದ್ದು, ಕೂಡಲೇ ಕೃಷ್ಣ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎಡದಂಡೆ ಕಾಲುವೆಗೆ ನೀರುಹರಿಸಬೇಕು’ ಎಂದು ರೈತ ಪ್ರಾಂತರೈತ ಸಂಘದ ಅಧ್ಯಕ್ಷ ಹಣಮಂತ್ರಾಯಗೌಡ ಒತ್ತಾಯಿಸಿದರು.
ಕಾಲುವೆಗಳಿಗೆ ನೀರು ಬಂದರೆ ಅರ್ಧ ನೀರು ಮಾತ್ರ ರೈತರಿಗೆ ಮುಟ್ಟುತ್ತವೆ. ಕಾಲುವೆಗಳು ಸಂಪೂರ್ಣ ಹಾಳಾಗಿದ್ದು ಗಿಡಗಂಟೆಗಳು ಬೆಳೆದಿವೆ. ಇದರಿಂದ ರೈತರಿಗೆ ಸರಿಯಾಗಿ ನೀರು ತಲುಪುವುದಿಲ್ಲ.
‘ಕೊನೆ ಭಾಗದ ರೈತರಿಗೆ ಇಲ್ಲಿಯವರೆಗೂ ನೀರು ಬಂದಿಲ್ಲ. ಕೊನೆಭಾಗದ ರೈತರು ರೈತರಲ್ಲವೇ ? ನಮಗೇಕೆ ಈ ಶಿಕ್ಷೆ ಹಲವು ಬಾರಿ ಮನವಿ ಸಲ್ಲಿಸಿದರೂ ನೀರು ಹರಿಸಿಲ್ಲ. ನಿಂಗಾಪುರ ಬಳಿಯಿರುವ ಕಿರುಕಾಲುವೆ ನೀರು ಸೋರಿಕೆಯಾಗುತ್ತಿದ್ದು , ಕೊನೆಭಾಗದ ರೈತರಿಗೆ ನೀರು ಬರುವುದೇ ಇಲ್ಲ’ ಎಂದು ಚಂದ್ರಶೇಖರ ವಜ್ಜಲ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.