ಯಾದಗಿರಿ: ಕೊಡೇಕಲ್ ಸಮೀಪ ಕುರಿ ಮೇಯಿಸಲು ಹೋಗಿದ್ದ ಮೂವರು ಕುರಿಗಾಹಿ ಯುವಕರು ಕೃಷ್ಣಾ ನದಿಯ ಮೇಲಿನಗಡ್ಡೆಯಲ್ಲಿ ಸಿಲುಕಿಕೊಂಡಿರುವುದು ಬುಧವಾರ ಬೆಳಕಿಗೆ ಬಂದಿದೆ. ನದಿಪಾತ್ರದಲ್ಲಿ ಮೇವು ಹೆಚ್ಚಿರುವುದರಿಂದ ಸೋಮನಗೌಡ, ಶೇಖರಗೌಡ ಹಾಗೂ ಗದ್ದೆಪ್ಪ ಹಣಮಂತ್ರಾಯ ಮೂರು ದಿನಗಳ ಹಿಂದೆ ಕುರಿಗಳೊಂದಿಗೆ ತೆರಳಿದ್ದರು.
ಬಸವಸಾಗರ ಜಲಾಶಯದ 10 ಗೇಟ್ಗಳ ಮೂಲಕ ನದಿಗೆ ನೀರು ಹರಿಬಿಟ್ಟಿದ್ದರಿಂದ ತೊಂದರೆಗೆ ಸಿಲುಕಿದ್ದಾರೆ. ಬುಧವಾರ ಮಧ್ಯಾಹ್ನದವರೆಗೂ ಪಾಲಕರೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಮಧ್ಯಾಹ್ನದ ನಂತರ ಸಂಪರ್ಕ ಕಡಿತಗೊಂಡಿರುವುದರಿಂದ ಆತಂಕ ಹೆಚ್ಚಾಗಿದೆ. ‘ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವವರು ಮೂರು ದಿನಗಳಿಂದ ಕುರಿ ಹಾಲು ಸೇವಿಸುತ್ತಿದ್ದಾರೆ’ ಎಂದು ಪಾಲಕರು ತಿಳಿಸಿದ್ದಾರೆ.
‘ಅಲ್ಲಿ ಯುವಕರಿಗೆ ಯಾವುದೇ ಪ್ರಾಣಾಪಾಯವಿಲ್ಲ. ನೀಲಕಂಠರಾಯನ ಗಡ್ಡೆಯಲ್ಲಿರುವ ದೋಣಿ ತರಿಸಲಾಗುತ್ತಿದ್ದು, ಈಜು ಪರಿಣತರ ಮೂಲಕ ಯುವಕರನ್ನು ರಕ್ಷಿಸಲು ಸಕಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ ಚೌವಲಕರ್ ‘ಪ್ರಜಾವಾಣಿ’ ಗೆ ತಿಳಿಸಿದರು.
ಸ್ಥಳಕ್ಕೆ ಎಎಸ್ಪಿ ಶಿವಪ್ರಕಾಶ ದೇವರಾಜ, ಸುರಪುರ ತಹಶೀಲ್ದಾರ್ ಸುರೇಶ ಅಂಕಲಗಿ, ಹುಣಸಗಿ ಹಾಗೂ ನಾರಾಯಣಪುರ ಸಿಪಿಐ, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.