ಹುಣಸಗಿ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಮೂರು ದಿನಗಳಿಂದ ಪಾದಯಾತ್ರೆ ಕೈಗೊಂಡಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾನುವಾರ ನಾರಾಯಣಪುರದ ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಎದುರು ನೀರಿಗಾಗಿ ಆಮರಣಾಂತ ಸತ್ಯಾಗ್ರಹ ಆರಂಭಿಸಿದರು.
ಜೆಡಿಎಸ್ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾದಯಾತ್ರಿ ಮಾತನಾಡಿ, ಕೋಟ್ಯಂತರ ವೆಚ್ಚಮಾಡಿ ಕಾಲುವೆ ನೀರನ್ನು ನಂಬಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಬೇಸಿಗೆ ಆಗಿದ್ದರಿಂದ ನೀರು ಅಗತ್ಯವಾಗಿದೆ. ಇನ್ನೂ ಎರಡು ವಾರ ನೀರು ಹರಿಸಿದರೆ ಅಲ್ಪಸ್ವಲ್ಪ ಬೆಳೆ ಕೈಗೆ ಬರುತ್ತದೆ. ಆದರೆ, ಸರ್ಕಾರ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಘಟಕದ ಮುಖಂಡರಾದ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ನಾವು ಮೂರು ದಿನಗಳಿಂದ ಪಾದಯಾತ್ರೆ ಕೈಗೊಂಡಿರುವುದು ಕೇವಲ ಮನವಿ ಸಲ್ಲಿಸಲು ಅಲ್ಲ. ಬದಲಿಗೆ ಮುಖ್ಯ ಕಾಲುವೆ ಸೇರಿದಂತೆ ಎಲ್ಲ ಉಪ ಕಾಲುವೆಗಳಿಗೆ ನೀರು ಹರಿಸುವ ವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ತಾಲ್ಲಕು ಘಟಕದ ಅಧ್ಯಕ್ಷ ಎಂ.ಜಿ. ಕೋಣ್ಣುರ ಮಾತನಾಡಿ, ಜಿಲ್ಲೆಯಲ್ಲಿ ತಿಂಗಳಿನಿಂದ ಕಾಲುವೆ ನೀರಿನ ಸಮಸ್ಯೆ ಎದುರಾಗಿದೆ. ಅಸಂಖ್ಯಾತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು, ನಮ್ಮ ಜಿಲ್ಲೆಯ ಕಾಳಜಿ ತೋರುತ್ತಿಲ್ಲ. ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಯಮನಪ್ಪನಾಯಕ ದೊರೆ ಹಾಗೂ ಶಿವಪ್ಪ ಸದಬ ಮಾತನಾಡಿ, ಈ ಗಂಭೀರ ಸಮಸ್ಯೆ ಕುರಿತು ಹಿರಿಯ ನಾಯಕರು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಗಮನಕ್ಕೆ ತರಲಾಗಿದೆ. ಮುಂದಿನ ಹೋರಾಟದ ಕುರಿತು ರೂಪರೇಶಗಳನ್ನು ಅವರ ಮಾರ್ಗದರ್ಶನದಲ್ಲಿಯೇ ನಡೆಯಲಿದೆ ಎಂದರು.
ಮುಖಂಡರಾದ ವೆಂಕಟೇಶ ಭಕ್ರಿ, ಪ್ರಕಾಶ ಪಾಟೀಲ, ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.