ಯಾದಗಿರಿ: ಪಕ್ಷಗಳು ಹಾಗೂ ಪಕ್ಷೇತರರು ಹೊರಡಿಸುವ ಪ್ರಣಾಳಿಕೆ ಗಳಲ್ಲಿ ಮಕ್ಕಳ ಹಕ್ಕು, ಯೋಜನೆಗಳಿಗೂ ಆದ್ಯತೆ ನೀಡ ಬೇಕು’ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ವಿಭಾಗೀಯ ಸಂಘಟಕ ವಿಠಲ್ ಚಿಕಣಿ ಒತ್ತಾಯಿಸಿದರು.
‘ರಾಜ್ಯದಲ್ಲಿ ಮಕ್ಕಳಿಗಾಗಿ ಇರುವ ಸರ್ಕಾರದ ಯೋಜನೆಗಳ ಮತ್ತು ನೀತಿಗಳ ಸಮರ್ಪಕ ಜಾರಿಯಾಗಿಲ್ಲ. ರಾಜ್ಯದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಅಭಿವೃದ್ಧಿ ಮತ್ತು ರಕ್ಷಣೆ ಆಗುತ್ತಿಲ್ಲ. ಜಾರಿಯಾಗಿರುವ ಯಾವ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರಣಾಳಿಕೆಯಲ್ಲಿಯೇ ಮಕ್ಕಳ ಅಭಿವೃದ್ಧಿ ಹಕ್ಕುಗಳ ಕುರಿತು ಪಕ್ಷಗಳು ಸೇರಿಸಬೇಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಸವಪೂರ್ವ ಆರೈಕೆ ಮತ್ತು ವಿಕಸನಕ್ಕಾಗಿ (ಇಸಿಸಿಡಿ– ಅರ್ಲಿ ಚೈಲ್ಡ್ಹುಡ್ ಕೇರ್ ಅಂಡ್ ಡೆವಲಪ್ಮೆಂಟ್) ಅಂಗನ ವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕಿದೆ. ಇದಕ್ಕಾಗಿ ಅಂಗನವಾಡಿಗಳಲ್ಲಿ ಹೆಚ್ಚು ಕಾರ್ಯಕರ್ತೆಯರನ್ನು ನೇಮಿಸಬೇಕು. ಮಕ್ಕಳ ಅಪೌಷ್ಟಿಕತೆ ಹೋಲಾಡಿಸುವುದು, ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣೆ, ಪ್ರತಿ ಜಿಲ್ಲೆಗಳಲ್ಲಿ ಮಕ್ಕಳ ವಿಶೇಷ ಆಸ್ಪತ್ರೆ ನಿರ್ಮಾಣ, ಮಕ್ಕಳ ಶಿಕ್ಷಣದ ಹಕ್ಕು, ಹೆಣ್ಣು ಮಕ್ಕಳ ರಕ್ಷಣೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ, ಬಾಲ ನ್ಯಾಯ ಮಂಡಳಿಗೆಳಿಗೆ ಸೂಕ್ತ ಅನುದಾನ ಒದಗಿಸುವಂತಹ ಅಂಶಗಳನ್ನು ಪ್ರಣಾಳಿಕೆಗಳು ಒಳಗೊಂಡಿರಬೇಕು’ ಎಂದು ಪಕ್ಷದ ಮುಖಂಡರುಗಳಿಗೆ ಅವರು ಮನವಿ ಮಾಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತರಾಯ ಕರಡ್ಡಿ, ಡಾನ್ಬೋಸ್ಕೊ ಸಮಾಜ ಸೇವಾಕೇಂದ್ರದ ಸಂಯೋಜಕ ಶರಣಪ್ಪ ಅಮರಾಪೂರ, ಮಕ್ಕಳ ಸಹಾಯವಾಣಿ ಕೇಂದ್ರ ಶರಬಯ್ಯ ಎಸ್.ಕಲಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.