ADVERTISEMENT

ಪೊಲೀಸರನ್ನು ನೋಡುವ ಮನಸ್ಸು ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:20 IST
Last Updated 30 ಆಗಸ್ಟ್ 2017, 7:20 IST

ಶಹಾಪುರ: ‘ಪೊಲೀಸರನ್ನು ನೋಡುವ ಮನಸ್ಸು ಬದಲಾಗಬೇಕು’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಹೇಳಿದರು.
ತಾಲ್ಲೂಕಿನ ವನದುರ್ಗ ಗ್ರಾಮದ ಕೋಟೆಯಲ್ಲಿ ಈಚೆಗೆ ಗೋಗಿ ಪೊಲೀಸ್‌ ಠಾಣೆ ಹಾಗೂ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೊಲೀಸ್‌ ಅಂದರೆ ಶಿಸ್ತು ಪಾಲನೆ ಹಾಗೂ ಮತ್ತೊಬ್ಬರನ್ನು ಗೌರವಿಸುವುದು ಆಗಿದೆ. ಉದ್ದನೆಯ ಮೀಸೆ ಬಿಟ್ಟು ಗದರಿಸುವುದು ಅಲ್ಲ. ಹಳೆಯ ಕಾಲದಂ ಪೊಲೀಸ್ ಇಲಾಖೆ ಇಲ್ಲ’ ಎಂದರು.

‘ಎಂಜಿನಿಯರ್ ಆಗಬೇಕು ಎಂಬ ಹಂಬಲವಿದೆ. ಆದರೆ ಇಂಗ್ಲಿಷ್ ಬರುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ, ‘ಸಂವಹನ ಮಾಡಲು ಭಾಷೆ ಬೇಕಷ್ಟೆ. ನನ್ನ ಮಾತೃಭಾಷೆ ತೆಲಗು. ಆದರೆ, ನಿಮ್ಮ ಜೊತೆ ಕನ್ನಡದಲ್ಲಿ ಸಂವಾದ ನಡೆಸುತ್ತಿದ್ದೇನೆ. ನಾವು ಮೊದಲು ಕೀಳರಿಮೆಯಿಂದ ಹೊರ ಬರಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳ
ಬೇಕು’ ಎಂದು ಎಎಸ್‌ಪಿ ಉತ್ತರಿಸಿದರು.

ADVERTISEMENT

‘ಹಿಂದುಳಿದ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ದೊಡ್ಡ ಸಮಸ್ಯೆಯಾಗಿದೆ. ಜರ್ಮನಿ, ರಷ್ಯಾ, ಜಪಾನ ದೇಶಗಳಲ್ಲಿ ತಾಯ್ನಾಡಿನ ಭಾಷೆಯಲ್ಲಿ ಪಠ್ಯಪುಸ್ತಕ ಹಾಗೂ ಕಲಿಕೆಗೆ ಪೂರಕವಾದ ಸಾಮಗ್ರಿಗಳು ದೊರೆಯುತ್ತವೆ. ನಮ್ಮಲ್ಲಿ ಮಾತ್ರ ಅಂತಹ ವ್ಯವಸ್ಥೆ ಇಲ್ಲ. ಬರುವ ದಿನದಲ್ಲಿ ಮಾತೃಭಾಷೆಯಲ್ಲಿ ಜ್ಞಾನದ ಅರಿವನ್ನು ವಿಸ್ತರಿಸಿಕೊಳ್ಳುವ ಪುಸ್ತಕ ಬರಲಿ’ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಇತಿಹಾಸ ಹಾಗೂ ಸ್ಮಾರಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಪ್ರಾಮಾಣಿಕತೆ ಜೀವನದ ಅಮೂಲ್ಯವಾದ ವಸ್ತು ಎಂಬುದು ಮರೆಯಬಾರದು’ ಎಂದು ಸಲಹೆ ನೀಡಿದರು. ಹಿರಿಯ ವಕೀಲ ಭಾಸ್ಕರರಾವ ಮುಡಬೂಳ. ಪಿಎಸ್‌ಐ ಕೃಷ್ಣಾ ಸುಬೇದಾರ, ರಾಜಗೋಪಾಲ ವಿಭೂತೆ ಹಾಗೂ ಗ್ರಾಮದ ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.