ADVERTISEMENT

ಪ್ರತಿ ಬೂತ್‌ನಿಂದ 100 ಜನರ ಕರೆತನ್ನಿ

ಪರಿವರ್ತನಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಎನ್.ಶಂಕ್ರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 7:38 IST
Last Updated 7 ಡಿಸೆಂಬರ್ 2017, 7:38 IST
ಪ್ರತಿ ಬೂತ್‌ನಿಂದ 100 ಜನರ ಕರೆತನ್ನಿ
ಪ್ರತಿ ಬೂತ್‌ನಿಂದ 100 ಜನರ ಕರೆತನ್ನಿ   

ಗುರುಮಠಕಲ್: ‘ಪಟ್ಟಣಕ್ಕೆ ಡಿ.9ರಂದು ಬರಲಿರುವ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶಕ್ಕೆ ಪ್ರತಿ ಬೂತ್‌ನ ವಿಸ್ತಾರಕರು, ಕಾರ್ಯಕರ್ತರು ಹಾಗೂ ಬೂತ್‌ಮಟ್ಟದ ಸಮಿತಿಯವರು ಕನಿಷ್ಠ 100 ಜನರನ್ನು ಕರೆತರಬೇಕು’ ಎಂದು ಯಾತ್ರೆಯ ಯಾದಗಿರಿ ಜಿಲ್ಲಾ ಉಸ್ತುವಾರಿ ಎನ್.ಶಂಕ್ರಪ್ಪ ಸಲಹೆ ನೀಡಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಬೇಜವಾಬ್ದಾರಿ ಆಡಳಿತ, ಮಿತಿಮೀರಿದ ಭ್ರಷ್ಟಾಚಾರ, ಗುಂಡಾ ವರ್ತನೆಯಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು ಪ್ರಬಲ ಜನಾಂದೋಲನವಾಗಿ ಪರಿವರ್ತನಾ ಯಾತ್ರೆಯು ಜನರೆಡೆಗೆ ಬರುತ್ತಿದೆ’ ಎಂದರು.

ADVERTISEMENT

‘ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ಜನಸಂಘದ ಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಸ್ವತಂತ್ರ ಭಾರತದ ಮೊದಲ ಮಂತ್ರಿಗಳಾಗಿದ್ದರು. ಅವರಿಬ್ಬರೂ ನೆಹರೂ ಅವರ ಸ್ವಾರ್ಥ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್‌ನಿಂದ ಹೊರಬಂದರು. ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವ ಡಾ.ಅಂಬೇಡ್ಕರ್ ಅವರನ್ನು ಅಂದು ಕಡೆಗಣಿಸಿ, ಅವಮಾನ ಮಾಡಿದ ಕಾಂಗ್ರೆಸ್ ಇಂದು ಅವರ ಭಾವಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಅಂಬೇಡ್ಕರ್ ಅವರ ಹೆಸರು ಹೇಳಲೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಹಕ್ಕಿಲ್ಲ. ದಲಿತ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ನಿಜಕ್ಕೂ ಅವರ ಅಭಿವೃದ್ಧಿಪರ ಚಿಂತನೆಯನ್ನು ಹೊಂದಿದೆಯೇ?’ ಎಂದು ಪ್ರಶ್ನಿಸಿದರು.

‘ಡಾ.ಅಂಬೇಡ್ಕರ್‌ ಅವರು ಧಮ್ಮದೀಕ್ಷೆ ಪಡೆದ ಸ್ಥಳವನ್ನು ಒಳಗೊಂಡಂತೆ ಪ್ರಧಾನಿ ಮೋದಿಯವರು ಅವರ ಜೀವನದ ಪ್ರಮುಖ 5 ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪಂಚತೀರ್ಥಗಳಾಗಿ ರೂಪಿಸುತ್ತಿರುವುದು ಬಿಜೆಪಿಯ ಬದ್ಧತೆಗೆ ಹಿಡಿದ ಕನ್ನಡಿ’ ಎಂದರು.

ರಾಯಚೂರು ಶಾಸಕ ತಿಪ್ಪರಾಜು ಹವಾಲ್ದಾರ್‌ ಮಾತನಾಡಿ, ‘ಮಿಷನ್ 150 ಯಶಸ್ಸಿಗಾಗಿ ನಾವೆಲ್ಲ ಶ್ರಮಿಸಬೇಕಿದೆ. ರಾಜ್ಯಕ್ಕೆ ಜನಪರ ಕಾಳಜಿಯ ಸರ್ಕಾರವನ್ನು ನೀಡಬೇಕೆಂದರೆ ಪಕ್ಷದ ಮಿಷನ್ ಯಶಸ್ವಿಯಾಗಬೇಕು. ಅದಕ್ಕಾಗಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದು ರಾಜ್ಯದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ನಮಗೆ ಉತ್ಸಾಹ ನೀಡಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಪ್ರಾಸ್ತಾವಿಕ ಮಾತನಾಡಿದರು. ಮತಕ್ಷೇತ್ರದ ಅಧ್ಯಕ್ಷ ನರಸಿಂಹುಲು ನಿರೇಟಿ, ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಮುಖಂಡರಾದ ವೆಂಕಟರೆಡ್ಡಿ ಮುದ್ನಾಳ, ಅಂಜನೇಯ ಕೊಡಗಲು, ಸಾಯಿಬಣ್ಣಾ ಬೋರಬಂಡಾ, ವೀಣಾ ಮೋದಿ, ಚಂದುಲಾಲ್ ಚೌದರಿ, ವೆಂಕಟಪ್ಪ ಅವಾಂಗಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.