ADVERTISEMENT

ಮತದಾರರ ಪರಿಷ್ಕರಣೆ ಪಾರದರ್ಶಕವಾಗಿರಲಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:54 IST
Last Updated 15 ನವೆಂಬರ್ 2017, 10:54 IST

ಯಾದಗಿರಿ: ‘ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಸ್ವಪ್ನಾ ಚಿತ್ರಮಂದಿರದಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಯಾದಗಿರಿ ತಾಲ್ಲೂಕಿನ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನ.15ರಿಂದ ನ.30 ರವರೆಗೆ ಪ್ರತಿ ಮನೆ-ಮನೆಗೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪವಾಗದಂತೆ ಪರಿಪೂರ್ಣ ಮಾಹಿತಿ ಪಡೆದು ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

‘ಸುರಪುರ ಕ್ಷೇತ್ರದಲ್ಲಿ 319, ಶಹಾಪುರ ಕ್ಷೇತ್ರದಲ್ಲಿ 261, ಯಾದಗಿರಿ ಮತಕ್ಷೇತ್ರದಲ್ಲಿ 264 ಹಾಗೂ ಗುರುಮಠಕಲ್ ಮತ ಕ್ಷೇತ್ರದಲ್ಲಿ 283 ಈ ರೀತಿ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1127 ಮಂದಿ ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲು ಮನೆ ಮನೆಗೆ ತೆರಳಿ ಮತದಾರರನ್ನು ವಿಚಾರಿಸಿ ಮಾಹಿತಿ ಪಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಮುಂದಿನ ಜ.1ರ ವೇಳೆಗೆ  ಮತದಾರರ ಕರಡು ಪಟ್ಟಿ ತಯಾರಿಸಲಾಗುತ್ತಿದ್ದು, ಅರ್ಜಿ ನಮೂನೆ–6 (ಮತದಾರಪಟ್ಟಿಗೆ ಹೊಸ ಸೇರ್ಪಡೆ), ಅರ್ಜಿ ನಮೂನೆ–7 (ಹೆಸರು ತೆಗೆದು ಹಾಕುವುದು), ಅರ್ಜಿ ನಮೂನೆ–8 (ತಿದ್ದುಪಡಿ) ಹಾಗೂ ಅರ್ಜಿ ನಮೂನೆ-8ಎ (ವಿಧಾನಸಭಾ ಕ್ಷೇತ್ರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಸ್ಥಳಾಂತರ) ಕುರಿತಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಇದಕ್ಕೆ ಮತದಾರರು ಸಹಕರಿಸಬೇಕು’ ಎಂದು ಹೇಳಿದರು.

ಮತಗಟ್ಟೆ ಅಧಿಕಾರಿಗಳಿಗೆ ಸಂಪನ್ಮೂಲ ವ್ಯಕ್ತಿ ಹಣಮಂತಪ್ಪ ಪೂಜಾರಿ ತರಬೇತಿ ನೀಡಿದರು. ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ತರಬೇತಿ ಉಸ್ತುವಾರಿ ವಹಿಸಿದ್ದರು. ಹೆಚ್ಚು ಜಿಲ್ಲಾಧಿಕಾರಿ ಡಾ.ಕೆ.ಜಗದೀಶ ನಾಯಕ ಇದ್ದರು.

* * 

ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ ಯುವ, ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಮತಗಟ್ಟೆ ಅಧಿಕಾರಿಗಳು ಗಮನ ಹರಿಸಬೇಕು. ಜೆ.ಮಂಜುನಾಥ‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.