ADVERTISEMENT

ಸಮಾನತೆ ಸಮಾಜ ನಿರ್ಮಾಣಕ್ಕೆ ಸಲಹೆ

ಶಹಾಪುರ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 6:40 IST
Last Updated 9 ಮಾರ್ಚ್ 2017, 6:40 IST
ಶಹಾಪುರ: ‘ಬೆವರು ಸುರಿಸಿ ದುಡಿದ ಮಹಿಳೆಯರಿಗೆ ಸಮರ್ಪಕವಾಗಿ ಕೂಲಿ ನೀಡುವಂತೆ ಅಂದು ಪ್ರತಿಭಟನೆಯ ಅಸ್ತ್ರ ಹಿಡಿದು ಹೋರಾಟ ನಡೆಸಿದ ಫಲವಾಗಿ ಇಂದು ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತಲಿವೆ. ಸಮಾನತೆಯ ಸಮಾಜ ನಿರ್ಮಾಣದ ಗುರಿ ನಮ್ಮದಾಗಬೇಕು’ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತಯ್ಯಾಬ್ ಸುಲ್ತಾನ್ ಹೇಳಿದರು.
 
ಇಲ್ಲಿನ ಸರ್ಕಾರಿ ನೌಕರ ಭವನದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಮಹಿಳಾ ಪರವಾಗಿ ಸಾಕಷ್ಟು ಕಾನೂನು ಜಾರಿಗೆ ಬಂದಿವೆ. ಆದರೆ ಅವುಗಳ ಅರಿವಿನ ಕೊರತೆಯಿಂದ ದೂರವಾಗಿವೆ. ಮಹಿಳೆಯು ಅನ್ಯಾಯವಾದಾಗ ಪ್ರತಿಭಟಿಸಿ ಕಾನೂನು ಮೊರೆ ಹೋಗಬೇಕು. ನ್ಯಾಯಾಲಯದಲ್ಲಿ ಕಾನೂನು ಚಿಕಿತ್ಸೆ ಘಟಕವಿದ್ದು, ಅದರ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
ಮಹಿಳೆಯರಿಂದ ಕೆಲ ಕಾನೂನು ದುರ್ಬಳಕೆಯಾಗುತ್ತಿರುವುದು ಬೇಸರ ಮೂಡಿಸಿದೆ. ಬಾಲ್ಯ ವಿವಾಹದ ಆಚರಣೆಯು ನಾಗರಿಕ ಸಮಾಜದ ಒಂದು ಕಪ್ಪುಚುಕ್ಕೆಯಾಗಿದೆ. ಮಹಿಳೆಯರು ಸಾಕ್ಷರಸ್ಥರಾಗಬೇಕು ಎಂದರು.
 
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಮಾತನಾಡಿ, ಕಾನೂನಿನಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಹಕ್ಕು ಇದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬುವುದು ನಾವು ಮರೆಯುವಂತಿಲ್ಲ. ಮಹಿಳೆಯರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
 
ವಕೀಲೆ ವಿಜಯಲಕ್ಷ್ಮಿ ಬಸರಡ್ಡಿ ಯಕ್ಷಿಂತಿ ಮಾತನಾಡಿ,‘ ನಮ್ಮ ಪಾಲಕರು ಮೊದಲು ಲಿಂಗಭೇದ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವುದಲ್ಲದೇ ಅವರನ್ನು  ಉತ್ತಮ ಶಾಲೆಗೆ ಸೇರಿಸುವುದಿಲ್ಲ. ಅಲ್ಲಿಯಿಂದಲೇ ನಮ್ಮ ಶೋಷಣೆ ಹಾದಿ ಶುರುವಾಗುತ್ತದೆ. ಶಿಕ್ಷಣದಿಂದ ದೂರ ಉಳಿದ ನಾವು ಮೊದಲು ಅಕ್ಷರದ ದೀವಿಗೆಯನ್ನು ಹಿಡಿದುಕೊಂಡು ಅರಿವಿನ ಬೆಳಕಿನ ನಡೆ ದಾಪುಗಾಲು ಹಾಕಬೇಕು. ಪುರುಷ ಪ್ರಧಾನ ಸಮಾಜ ಎಂಬ ಶಬ್ದಕ್ಕೆ ಕಡಿವಾಣ ಹಾಕಬೇಕು ಎಂದರು.
 
ವಕೀಲರ ಸಂಘದ ಅಧ್ಯಕ್ಷ  ವಿಶ್ವನಾಥರಡ್ಡಿ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜೆಎಂಎಫ್‌ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಸಾತ್ವಿಕ, ಸರ್ಕಾರಿ ಹಿರಿಯ ಅಭಿಯೋಜಕ ಹೈಯ್ಯಾಳಪ್ಪ ಬಳಬಟ್ಟಿ, ಸಿಡಿಪಿಒ ಟಿ.ಪಿ.ದೊಡ್ಮನಿ ಉಪಸ್ಥಿತರಿದ್ದರು.
 
ವಕೀಲರಾದ ಹೇಮರಡ್ಡಿ ಕೊಂಗಂಡಿ, ಬಸಮ್ಮ ರಾಂಪುರೆ, ಸತ್ಯಮ್ಮ ಹೊಸ್ಮನಿ, ಆಶಾ ಪರ್ವೀನ್, ದೊಡ್ಡೇಶ ದರ್ಶನಾಪುರ, ನಿಂಗಣ್ಣ ದೋರನಹಳ್ಳಿ ಇದ್ದರು. 

* ಮಹಿಳೆಯರ ರಕ್ಷಣೆಗಾಗಿ ಪ್ರಬಲವಾದ ಕಾನೂನುಗಳು ಜಾರಿಯಲ್ಲಿವೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರು ಕಾನೂನು ಸದ್ಬಳಕೆ ಮಾಡಿಕೊಂಡು ನ್ಯಾಯ ಪಡೆಯಬೇಕು.
ನಾಮದೇವ ಸಾಲಮಂಟಪಿ, ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.