ಕಂಪ್ಲಿ (ಬಳ್ಳಾರಿ ಜಿಲ್ಲೆ): ಬಿಜೆಪಿ ಮುಖಂಡ ಶ್ರೀರಾಮಲು ಸೋದರಳಿಯ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಅವರ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್. ಗಣೇಶ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಗಣೇಶ ಅವರು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸುರೇಶ್ ಬಾಬು ವಿರುದ್ಧವೇ ಸೋತಿದ್ದರು. ಈ ಬಾರಿ ಅನುಕಂಪದ ಅಲೆ ಮತ್ತು ಹಾಲಿ ಶಾಸಕರ ವಿರುದ್ಧ ಜನಸಾಮಾನ್ಯರ ಅಸಮಾಧಾನ ಎರಡು ಅಂಶಗಳು ಗಣೇಶ ಅವರ ಗೆಲುವಿಗೆ ಕಾರಣವಾಗಿವೆ ಎನ್ನಲಾಗುತ್ತಿದೆ.
ಜನಸಾಮಾನ್ಯರ ಕೈಗೆ ಸಿಗದ ಶಾಸಕ: ಕಂಪ್ಲಿಯಲ್ಲಿ ಸುರೇಶ್ ಬಾಬು ಅವರು ಶಾಸಕರ ಕಚೇರಿ ತೆರೆದರೂ ಅದು ಕಾಟಾಚಾರಕ್ಕೆ ಎಂಬಂತಿತ್ತು. ಶಾಸಕರನ್ನು ಭೇಟಿಯಾಗಲು ಕ್ಷೇತ್ರದ ಜನರು ಬಳ್ಳಾರಿ ನಗರದಲ್ಲಿದ್ದ ಕಚೇರಿಗೇ ಹೋಗಬೇಕಿತ್ತು. ಜತೆಗೆ ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಪಕ್ಷದ ಮುಖಂಡರ ನೆರವಿನಿಂದ ಸಂಪರ್ಕಿಸಬೇಕಿತ್ತು. ಶಾಸಕರಾದ ಮೊದಲ ಅವಧಿಯಲ್ಲಿ (2008) ತಮ್ಮದೇ ಸರ್ಕಾರವಿದ್ದರೂ, ಕ್ಷೇತ್ರಕ್ಕೆ ಹೇಳಿಕೊಳ್ಳುವಂಥ ಅನುದಾನ ತಂದು ಅಭಿವೃದ್ಧಿ ಮಾಡಲಿಲ್ಲ ಎಂಬ ಆರೋಪ ಅವರ ಮೇಲಿತ್ತು.
ಅವರು ವಿರುದ್ಧ ಮತದಾರರ ಆಕ್ರೋಶ ಮನೆ ಮಾಡಿತ್ತು. ಚುನಾವಣೆಗಾಗಿ ಕಾಯುತ್ತಿದ್ದ ಅವರು ಈಗ ಸರಿಯಾಗಿಯೇ ಸೇಡು ತೀರಿಸಿಕೊಂಡರು ಎಂದು ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.