ADVERTISEMENT

‘ಗರುಡ’ ಏರಿದ ಸಿದ್ಧಾರ್ಥ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
‘ಗರುಡ’ ಏರಿದ ಸಿದ್ಧಾರ್ಥ
‘ಗರುಡ’ ಏರಿದ ಸಿದ್ಧಾರ್ಥ   
ಗಾಂಧಿನಗರದ ಆಕಾಶದಲ್ಲಿ ರೆಕ್ಕೆ ಬಿಚ್ಚಲಿಕ್ಕೆ ‘ಗರುಡ’ ತಯಾರಾಗುತ್ತಿದ್ದಾನೆ!
 
ಸಿದ್ಧಾರ್ಥ ಮಹೇಶ್ ಅವರ ಕಣ್ಣುಗಳಲ್ಲಿ ಕೂಡ ‘ಗರುಡ’ನ ಮಹತ್ವಾಕಾಂಕ್ಷೆ ಕಾಣಿಸುತ್ತಿತ್ತು. ‘ಸಿಪಾಯಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಸಿದ್ಧಾರ್ಥ, ಈಗ ‘ಗರುಡ’ನಾಗಿ ಮತ್ತೆ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.
 
ಕಂಠೀರವ ಸ್ಟುಡಿಯೊದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉತ್ಸಾಹದಿಂದ ಓಡಾಡಿಕೊಂಡಿದ್ದುದು ಚಿತ್ರದ ಬಗೆಗಿನ ಅವರ ನಿರೀಕ್ಷೆಗಳನ್ನು ಸೂಚಿಸುವಂತಿತ್ತು. ಧನಕುಮಾರ್‌ ಚಿತ್ರದ ನಿರ್ದೇಶಕರು. 
 
ಮೈ ನವಿರೇಳಿಸುವ ರೋಚಕ ಸನ್ನಿವೇಶಗಳ ಜೊತೆಗೆ ಪ್ರೇಕ್ಷಕರನ್ನು ರಂಜಿಸುವ ನಗೆ ಟಾನಿಕ್‌ಗೂ ಕಥೆಯಲ್ಲಿ ಸಾಕಷ್ಟು ಅವಕಾಶ ಇದೆಯಂತೆ. ‘ಸಿನಿಮಾದ ನಿರೂಪಣೆ ಭಿನ್ನವಾಗಿ ಇರಲಿದೆ. ನನಗೆ ಒಳ್ಳೆಯ ಹೆಸರು ತಂದುಕೊಡುವ ಪಾತ್ರವೊಂದು ಬೇಕು ಅನ್ನಿಸುತ್ತಿದ್ದಾಗ ದೊರೆತ ಈ ಕಥೆ ಖುಷಿ ಕೊಟ್ಟಿದೆ’ ಎಂದು ಸಿದ್ಧಾರ್ಥ ಸಂತಸ ಹಂಚಿಕೊಂಡರು.
 
‘ಸಿಪಾಯಿ’ಗಿಂತಲೂ ಮೊದಲೇ ‘ಗರುಡ’ ಚಿತ್ರ ಸೆಟ್ಟೇರಬೇಕಿತ್ತು. ಕಥೆ ಬಯಸುತ್ತಿದ್ದ ದೊಡ್ಡ ಬಜೆಟ್‌ನಿಂದಾಗಿ ಸಿದ್ಧಾರ್ಥ ಹಿಂಜರಿದಿದ್ದರು. ಈಗ ತೆಲುಗಿನ ನಿರ್ಮಾಪಕ ಪ್ರಸಾದ್‌ ರೆಡ್ಡಿ ‘ಗರುಡ’ನಿಗೆ ಬೆಂಬಲವಾಗಿದ್ದಾರೆ. 
 
 
ಆಶಿಕಾ ಚಿತ್ರದ ನಾಯಕಿ. ‘ಈ ಚಿತ್ರದಲ್ಲಿ ನನ್ನದು ಸಂಪ್ರದಾಯಸ್ಥ ಕುಟುಂಬವೊಂದರ ಹುಡುಗಿಯ ಪಾತ್ರ. ಪಾತ್ರದ ಗಟ್ಟಿತನ ನನಗೆ ಇಷ್ಟವಾಯಿತು’ ಎಂದರು ಆಶಿಕಾ. ದೀಪಾ ಸನ್ನಿಧಿ ಚಿತ್ರದ ಮತ್ತೊಬ್ಬ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.