ಬೆಂಗಳೂರು: ‘ತಿಥಿ’ ಸಿನಿಮಾ ನೋಡಿದವರು ಎಂದಿಗೂ ಮರೆಯಲಾಗದ ಹೀರೊ ಗಡ್ಡಪ್ಪ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಬಾರಿ ಅವರು ಅಭಿನಯಿಸಿರುವುದು ‘ಕಂತ್ರಿ ಬಾಯ್ಸ್’ ಎಂಬ ಸಿನಿಮಾದಲ್ಲಿ. ಈ ಸಿನಿಮಾದ ನಿರ್ದೇಶನ ಎಸ್. ರಾಜು ಚಟ್ಣಳ್ಳಿ ಅವರದ್ದು. ಎಂ.ಸಿ. ಹೇಮಂತ್ ಗೌಡ ಇದರ ನಿರ್ಮಾಪಕರು.
ರಾಜು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ರಾಜು ಅವರು ಈ ಹಿಂದೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಳ್ಳಿಗಳಲ್ಲಿ ಸೋಮಾರಿ ಯುವಕರಿಗೆ ‘ಕಂತ್ರಿ ಬಾಯ್ಸ್’ ಎಂದು ಕರೆಯುತ್ತಾರೆ. ಇಂತಹ ಹುಡುಗರೇ ಮುಂದೊಮ್ಮೆ ಒಳ್ಳೆಯ ಕೆಲಸ ಮಾಡಿ ‘ಕಂಟ್ರಿ ಬಾಯ್ಸ್’ ಆಗುತ್ತಾರೆ. ಈ ಸಿನಿಮಾದ ಕಥೆ ಇಂಥದ್ದೊಂದು ನೆಲೆಯಲ್ಲಿ ಇದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.
ಹೆಣ್ಣೊಬ್ಬಳು ಬೆಲೆವೆಣ್ಣು ಆಗುವುದು ಏಕೆ, ಆಕೆ ಹಾಗೆ ಆಗುವುದರಲ್ಲಿ ಪುರುಷರ ತಪ್ಪು ಎಷ್ಟಿರುತ್ತದೆ, ಆ ಸ್ಥಿತಿಯಿಂದ ಹೆಣ್ಣು ಹೊರಬರುವುದು ಹೇಗೆ ಎಂಬೆಲ್ಲ ವಿಚಾರಗಳ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆಯಂತೆ. ಅಲ್ಲದೆ, ಥ್ರಿಲ್ಲರ್ ವಿಷಯವನ್ನು ಈ ಸಿನಿಮಾದಲ್ಲಿ ಹಾಸ್ಯದ ಲೇಪದೊಂದಿಗೆ ಹೇಳಲಾಗಿದೆ ಎಂಬುದು ಸಿನಿತಂಡದ ಅಂಬೋಣ.
ಅರವಿಂದ್, ಸಂಧ್ಯಾ, ವಸಂತಿ ಮತ್ತು ಅನಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಡ್ಯ, ಹಾಸನ ಮತ್ತು ತುಮಕೂರು ಕಡೆ ಚಿತ್ರೀಕರಣ ನಡೆದಿದೆ. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಅವರೂ ಬಂದಿದ್ದರು. ‘ನಿರ್ದೇಶಕರು ಏನು ಹೇಳಿಕೊಟ್ಟರೋ ಅದನ್ನು ಮಾಡಿದ್ದೇನೆ’ ಎಂದರು ಗಡ್ಡಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.