ದೃಶ್ಯ ಸಂಸ್ಥೆಯ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹಾಗೂ ಗುರುವಾರ ಹನುಮಂತನಗರದಲ್ಲಿರುವ ಕೆ.ಎಚ್.ಕಲಾಸೌಧದಲ್ಲಿ ಸಂಜೆ ೬.೦೦ಕ್ಕೆ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ರಂಗಭೂಮಿಯಲ್ಲಿ ಸಾಧನೆಗೈದ ಕಲಾವಿದರಿಗೆ ರಂಗಗೌರವವನ್ನು ಹಮ್ಮಿಕೊಳ್ಳಲಾಗಿದ್ದು ಇದರೊಂದಿಗೆ ಬಸ್ತಿ ಹಾಗೂ ಪೋಲಿ ಕಿಟ್ಟಿ ಎಂಬ ನಾಟಕಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿ ಡಾ.ವಿಜಯಾ ವಹಿಸಲಿದ್ದಾರೆ. ಅತಿಥಿ– ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಎನ್.ಹರಿಕುಮಾರ್, ಅಚ್ಯುತ ರಾವ್. ರಂಗಗೌರವ– ನಟ ಎಂ.ಸಿ.ಆನಂದ್, ಅಂಕಲ್ ಶ್ಯಾಂ, ಶ್ರೀಧರ್ ಭಾರಿಘಾಟ್.
ಸಂಜೆ 7ಕ್ಕೆ ಬಸ್ತಿ ನಾಟಕ. ರಚನೆ– ಯು.ಮೋಹನಚಂದ್ರ. ನಿರ್ದೇಶನ– ದಾಕ್ಷಾಯಿಣಿ ಭಟ್. ಗುರುವಾರ ಸಂಜೆ 7ಕ್ಕೆ ಪೋಲಿ ಕಿಟ್ಟಿ ನಾಟಕ ಪ್ರದರ್ಶನ. ರಚನೆ– ಟಿ.ಪಿ.ಕೈಲಾಸಂ. ನಿರ್ದೇಶನ– ದಾಕ್ಷಾಯಿಣಿ ಭಟ್.
ಪೋಲಿ ಕಿಟ್ಟಿ
ಪೋಲಿ ಕಿಟ್ಟಿ ನಾಟಕವು ವಿನೋದಾತ್ಮಕ ವಿಡಂಬನಾ ನಾಟಕಗಳಲ್ಲಿ ಒಂದು. ನಾಟಕದ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಪೋಲಿ ಕಿಟ್ಟಿಯ ಮೂಲಕ ಆಗಿನ ಸಮಾಜದ ಒಳ-ಹೊರ ನೋಟಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ನಾಟಕದ ವಸ್ತುವು ಇಂದಿಗೂ ಪ್ರಸ್ತುತವಾಗಿದ್ದು ಇಂದಿನ ಶಿಕ್ಷಣವನ್ನು ಇದು ಲೇವಡಿ ಮಾಡುತ್ತದೆ, ಜ್ಞಾನವೆಂಬುದು ಬರೀ ಪುಸ್ತಕದಲ್ಲಿ ಇರೋದಿಲ್ಲ, ನಮ್ಮ ಸುತ್ತ ಮುತ್ತಲಿನ ವಾಸ್ತವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಅದೇ ನಿಜವಾದ ಶಿಕ್ಷಣ. ಶಿಸ್ತು ಒಳ್ಳೆಯದು ಆದರೆ ಬಹಿರಂಗವಾದ ಹೇಳಿಕೆಗಳಿಂದ ಅದು ಬರುವುದಿಲ್ಲ, ಅದು ಅಂತರಂಗದಿಂದ ಒಡಮೂಡಬೇಕು ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಡುವ ಈ ಪ್ರಯೋಗವು ನಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ಪ್ರಶ್ನಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.