ADVERTISEMENT

ವಿಶ್ವೇಶ್ವರಯ್ಯ ಭಾಷಣ ಸಂಪುಟ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ವಿಶ್ವೇಶ್ವರಯ್ಯ
ವಿಶ್ವೇಶ್ವರಯ್ಯ   

ಬ್ರಿಟಿಷರು ಅನುಸರಿಸುತ್ತಿದ್ದ ಅಸಮಾನತೆಯನ್ನು ವಿರೋಧಿಸಿ ಭಾರತೀಯರಿಗಷ್ಟೇ ಮೀಸಲಾದ ಚಟುವಟಿಕೆ ಕೇಂದ್ರವಾಗಿ ಆರಂಭವಾದುದು ನಗರದ ಸೆಂಚುರಿ ಕ್ಲಬ್‌. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಕ್ಲಬ್‌ ಸ್ಥಾಪನೆಯ ರೂವಾರಿ. ಇದೀಗ, ವಿಶ್ವೇಶ್ವರಯ್ಯ ಅವರ 156ನೇ ಜನ್ಮ ದಿನಾಚರಣೆಯ ನಿಮಿತ್ತ ಅರ್ಥಪೂರ್ಣ ಯೋಜನೆಯೊಂದನ್ನು ಕ್ಲಬ್‌ ಹಮ್ಮಿಕೊಂಡಿದೆ.

ವಿಶ್ವೇಶ್ವರಯ್ಯ ಅವರ ಅಪರೂಪದ ಭಾಷಣಗಳು ಮತ್ತು ಅಪ್ರಕಟಿತ ಬರಹಗಳ ಸಂಪುಟವನ್ನು ಕ್ಲಬ್‌ ಸಿದ್ಧಪಡಿಸಿದ್ದು, ಸೆ.16ರಂದು ಬಿಡುಗಡೆ ಮಾಡಲಿದೆ. ಈ ಮೂಲಕ, ಅವರ ಆರ್ಥಿಕ ಮತ್ತು ಬೌದ್ಧಿಕ ಚಿಂತನೆಗಳ ದಾಖಲೀಕರಣ ನಡೆಯಲಿದೆ.

1945ರಲ್ಲಿ ವಿಶ್ವೇಶ್ವರಯ್ಯ ಅವರ ಸಂಪಾದಕತ್ವದಲ್ಲಿ ಮುಂಬೈಯ ಅಖಿಲ ಭಾರತ ಉತ್ಪಾದಕರ ಒಕ್ಕೂಟ ಹೊರತಂದ ‘ಪ್ರಾಂತೀಯ ಸರ್ಕಾರಗಳಲ್ಲಿ ಭಾರಿ, ಬೃಹತ್‌ ಕೈಗಾರಿಕೆಗಳ ಅಭಿವೃದ್ಧಿ’ ಎಂಬ ಸಂಪುಟದಲ್ಲಿರುವ ಅವರ ಲೇಖನ, 1950, 1955ರಲ್ಲಿ ಮಾಡಿದ್ದ ಭಾಷಣಗಳು ಮತ್ತು 1956ರಲ್ಲಿ ಸಿದ್ಧಪಡಿಸಿದ್ದ ‘ಗ್ರಾಮೀಣ ಭಾಗದ ಕೈಗಾರಿಕೀಕರಣ’ ವರದಿ ಈ ಸಂಪುಟದಲ್ಲಿದೆ.

ADVERTISEMENT

ಬೆಂಗಳೂರು ಸಾಹಿತ್ಯ ಕೂಟದಲ್ಲಿ ಮೇ 23, 1953ರಲ್ಲಿ ಮಾಡಿದ್ದ ಭಾಷಣವನ್ನು ವಿಶ್ವೇಶ್ವರಯ್ಯ ಅವರ ಜೀವಿತಾವಧಿಯ ಮಹತ್ವದ ಭಾಷಣಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ.

‘ಬೆಂಗಳೂರಿನ ಸಮರ್ಪಕ ಬೆಳವಣಿಗೆಗೆ 'ವಿಶಾಲ ಬೆಂಗಳೂರು’ ಎನ್ನುವ ಪರಿಕಲ್ಪನೆಯನ್ನು (ಮಾಸ್ಟರ್‌ ಪ್ಲ್ಯಾನ್‌- ಸಮಗ್ರ ಯೋಜನೆ) ನಾವು ಸಿದ್ಧಪಡಿಸಬೇಕಾಗಿದೆ' ಎಂದು ಅವರು ಅಂದೇ ಹೇಳಿದ್ದರು.

‘ಬೆಂಗಳೂರಿನ ಅಭಿವೃದ್ಧಿಗೆ ಹಲವು ದೂರದೃಷ್ಟಿ ಯೋಜನೆಗಳನ್ನು ರೂಪಿಸಿದ್ದ ವಿಶ್ವೇಶ್ವರಯ್ಯ ಅವರ ಭಾಷಣಗಳಿಗೆ ಸಂಬಂಧಿಸಿದ ಹಲವು ಕೃತಿಗಳು ಈಗಾಗಲೇ ಕೆಲವು ಬಂದಿವೆ. ಆದರೆ ಅಪರೂಪದ ಲೇಖನ- ಚಿತ್ರಗಳನ್ನು ಹೊಂದಿರುವ ಕಾರಣ ಈ ಕೃತಿಗೆ ಹೆಚ್ಚು ಮಹತ್ವವಿದೆ’ ಎಂದು ಸೆಂಚುರಿ ಕ್ಲಬ್‌ನ ಅಧ್ಯಕ್ಷ ಎಸ್‌.ಪಿ.ರಕ್ಷಿತ್‌ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.