ನವದೆಹಲಿ: ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿರುವ ಕೆಲ ಖಾಸಗಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಗಣಿ ಕಂಪನಿಗಳ ವಿರುದ್ಧ ತನಿಖೆ ಮುಂದುವರೆಸಲು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ವಿಶೇಷ ತನಿಖಾ ತಂಡ 2014ರಲ್ಲಿ ಈ ಸಂಬಂಧದ ಎಂಟು ಮಂದಿಯ ಕುರಿತ ತನಿಖೆಯನ್ನು ರಾಜ್ಯ ಹೈಕೋರ್ಟ್ ಕಳೆದ ಮಾರ್ಚ್ 28ರಂದು ರದ್ದು ಮಾಡಿ ತೀರ್ಪು ನೀಡಿತ್ತು. ಈ ತೀರ್ಪಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿತು.
ಗಣಿಗಾರಿಕೆ ಲೈಸೆನ್ಸ್ ಇಲ್ಲದಿದ್ದರೂ ಆಪಾದಿತರು ಅಕ್ರಮ ಗಣಿಗಾರಿಕೆಯನ್ನು ಮುಂದುವರೆಸಿದರು ಎಂದು ರಾಜ್ಯ ಸರ್ಕಾರದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಯು.ಯು.ಲಲಿತ್ ನ್ಯಾಯಪೀಠದ ಮುಂದೆ ನಿವೇದಿಸಿಕೊಂಡರು.
ಖನಿಜ ನಿಕ್ಷೇಪಗಳಿರುವ ಜಮೀನಿನ ಪಟ್ಟಾದಾರರು ಸದರಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಿಸಿಕೊಳ್ಳದೆ, ಪರಿಸರ ಅನುಮೋದನೆ ಪಡೆಯದೆ, ಕಾಮಗಾರಿ ಅನುಮತಿಯನ್ನೂ ಕೋರದೆ ಗಣಿಗಾರಿಕೆ ನಡೆಸುವ ಮೂಲಕ ಪರಿಸರಕ್ಕೆ ಗಂಡಾಂತರ ಉಂಟು ಮಾಡುತ್ತಾರೆ ಎಂದು ಹೇಳಿದ ನ್ಯಾಯಪೀಠ ಹೇಳಿತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿತು.
ಕೊಪ್ಪಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕಾಗಿ ಶೇಖರಪ್ಪ, ಮಲ್ಲಿಕಾರ್ಜುನ, ಪ್ರೇಮಚಂದ್ ಜೈನ್, ವೆಂಕಟೇಶ ಬಾಬು ಹಾಗೂ ಲಿಂಗನಗೌಡ, ಬಾಗಲಕೋಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಶರಣಪ್ಪ, ಸಂಗಪ್ಪ ಹಾಗೂ ಭದ್ರಪ್ಪ ಅವರನ್ನು ವಿಶೇಷ ತನಿಖಾ ತಂಡ ತನಿಖೆಗೆ ಒಳಪಡಿಸಿತ್ತು. ಈ ಎಲ್ಲರಿಗೂ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.