ನವದೆಹಲಿ (ಪಿಟಿಐ): ಉಗ್ರರ ದಾಳಿಯಂತಹ ತುರ್ತು ಸನ್ನಿವೇಶವನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎನ್ನುವ ಬಗ್ಗೆ ದೇಶದಾದ್ಯಂತ ಶಾಲೆಗಳಿಗೆ ಸಮಗ್ರ ಮಾರ್ಗಸೂಚಿ ಕಳುಹಿಸಲಾಗಿದೆ.
ಪಾಕಿಸ್ತಾನದ ಪೆಶಾವರದ ಸೇನಾ ಶಾಲೆಯಲ್ಲಿ ತಾಲಿಬಾನ್ ಬಂಡುಕೋರರು ಮಕ್ಕಳ ಹತ್ಯಾಕಾಂಡ ನಡೆಸಿದ ಕಾರಣ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಗೃಹ ಸಚಿವಾಲಯ ಈ ಮಾರ್ಗಸೂಚಿ ಹೊರಡಿಸಿದೆ.
ಅಪಹರಣ ಯತ್ನ, ಮನಬಂದಂತೆ ಗುಂಡಿನ ದಾಳಿಯಂತಹ ಸನ್ನಿವೇಶವನ್ನು ಎದುರಿಸಲು ಮಕ್ಕಳು, ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಬೇಕು ಎಂದೂ ಹೇಳಲಾಗಿದೆ.
ಈ ಮಾರ್ಗಸೂಚಿಯನ್ನು ಓದಿ ಶಾಲಾ ಸಿಬ್ಬಂದಿ ಹಾಗೂ ಶಿಕ್ಷರ ಗಮನಕ್ಕೆ ತರಬೇಕು. ಇದನ್ನು ಕಾರ್ಯಗತಗೊಳಿಸುವುದಕ್ಕೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಶಾಲಾ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
*ಪ್ರತಿ ಶಾಲೆಯಲ್ಲೂ ಮೂರರಿಂದ ನಾಲ್ಕು ಗೇಟುಗಳನ್ನು ಒಳಗೊಂಡ ಕಾಂಕ್ರೀಟ್ ಕಾಂಪೌಂಡ್ ಇರಬೇಕು ಪ್ರತಿ ಗೇಟಿನಲ್ಲಿಯೂ ಮೂವರು ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯಬೇಕು
*ಕಾಂಪೌಂಡ್ ಮೇಲಿನ ಕಬ್ಬಿಣದ ಗ್ರಿಲ್ ಮೇಲೆ ಮುಳ್ಳು ತಂತಿಗಳನ್ನು ಅಳವಡಿಸುವ ಬಗ್ಗೆ ಚಿಂತಿಸಬೇಕು
*ಶಾಲೆ ಅಧಿಕಾರಿಗಳ ಬಳಿ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯ ಮಾಹಿತಿ ಇರಬೇಕು
*ಶಾಲಾ ಕಾಂಪೌಂಡ್ ಗೋಡೆಗಳಲ್ಲಿ ಹಾಗೂ ಶಾಲೆಯ ಒಳಗೆ ಕೆಲವು ಕಡೆ ಸಿಸಿಟಿವಿಗಳನ್ನು ಅಳವಡಿಸಬೇಕು
*ಶಸ್ತ್ರಧಾರಿ ಉಗ್ರರು ಶಾಲೆಯೊಳಗೆ ಪ್ರವೇಶಿಸಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಒತ್ತೆಯಿರಿಸಿಕೊಂಡಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಹಾಗೂ ಮಕ್ಕಳು ತಾವಿರುವ ಸ್ಥಳದಲ್ಲಿಯೇ ಇರಬೇಕು. ಭಯದಿಂದ ಬಾಗಿಲ ಬಳಿಗೆ ಓಡಿಹೋಗಬಾರದು. ಒಳಗಿನಿಂದಲೇ ಬಾಗಿಲು ಹಾಕಿಕೊಂಡು ಆದಷ್ಟೂ ನೆಲಮಟ್ಟಕ್ಕೆ ಬಾಗಿ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.