ನವದೆಹಲಿ (ಪಿಟಿಐ): ದೇಶದ 10 ರಾಜ್ಯಗಳಲ್ಲಿ ತೆರವಾಗಿದ್ದ 3 ಲೋಕಸಭಾ ಮತ್ತು 33 ವಿಧಾನಸಭಾ ಕ್ಷೇತ್ರಗಳಿಗೆ 13ರಂದು ನಡೆದಿದ್ದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.
ಗುಜರಾತ್ನ ವಡೋದರಾ, ಉತ್ತರಪ್ರದೇಶದ ಮೈನ್ಪುರಿ ಮತ್ತು ತೆಲಂಗಾಣದ ಮೆದಕ್ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಉತ್ತರ ಪ್ರದೇಶದ 11, ಗುಜರಾತಿನ 9, ರಾಜಸ್ತಾನದ 4, ಪಶ್ಚಿಮ ಬಂಗಾಳದ 2, ಈಶಾನ್ಯ ರಾಜ್ಯಗಳ 5, ಛತ್ತೀಸಗಡ, ಆಂಧ್ರಪ್ರದೇಶದ ತಲಾ 1 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಗುಜರಾತ್ನ ವಡೋದರಾ ಮತ್ತು ಉತ್ತರಪ್ರದೇಶದ ವಾರಾಣಸಿ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿ ಕ್ಷೇತ್ರವನ್ನು ಉಳಿಸಿಕೊಂಡು ವಡೋದರಾ ಕ್ಷೇತ್ರವನ್ನು ತೆರವುಗೊಳಿಸಿದ್ದರು.
ತೆಲಂಗಾಣದ ಮೆದಕ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಕೆ.ಚಂದ್ರಶೇಖರ್ ರಾವ್, ತೆಲಂಗಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತೆರವು ಮಾಡಿದ್ದ ಮೈನ್ಪುರಿ ಲೋಕಸಭಾ ಕ್ಷೇತ್ರಕ್ಕೆ ಮುಲಾಯಂ ಸಿಂಗ್ ಅಣ್ಣನ ಮೊಮ್ಮಗ ತೇಜ್ ಪ್ರತಾಪ್ ಸಿಂಗ್ ಯಾದವ್ ಸ್ಪರ್ಧಿಸಿದ್ದಾರೆ.
ಹೀಗಾಗಿ ಈ ಕ್ಷೇತ್ರ ಎಸ್ಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ಈಗ ವಿಧಾನಸಭಾ ಉಪಚುನಾವಣೆಯಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ಮತ್ತು ಮಹಾರಾಷ್ಟ್ರಗಳ ವಿಧಾನಸಭಾ ಚುನಾವಣೆಯ ಮೇಲೆ ಈ ಫಲಿತಾಂಶ ಪ್ರಭಾವ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.