ADVERTISEMENT

ಎಲ್‌ಪಿಜಿ ಮಿತಿ ಇಳಿಕೆ ಇಲ್ಲ: ಸಚಿವ ಧರ್ಮೇಂದ್ರ ಪ್ರಧಾನ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ 12 ಎಲ್‌ಪಿಜಿ ಸಿಲಿಂಡರ್‌ಗಳ ಮಿತಿ ಕಡಿಮೆ ಮಾಡುವ  ಉದ್ದೇಶ ಸರ್ಕಾರಕ್ಕೆ ಇಲ್ಲ.  ಅಲ್ಲದೆ ಮುಂದಿನ ಜೂನ್‌ ಒಳಗೆ ಎಲ್ಲ ಗ್ರಾಹಕರಿಗೂ ನಗದು ರೂಪ­ದಲ್ಲಿ ಸಬ್ಸಿಡಿ ನೀಡುವ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು.

ತಿಂಗಳಿಗೆ ಒಂದರಂತೆ ವರ್ಷದಲ್ಲಿ ಸಬ್ಸಿಡಿ ದರದಲ್ಲಿ ೧೨ ಎಲ್‌ಪಿಜಿ ಸಿಲಿಂಡರ್‌ ನೀಡಲಾಗುತ್ತದೆ ಎಂದು ಈ ಹಿಂದಿನ ಸರ್ಕಾರ ಹೇಳಿತ್ತು.ಆದರೆ ಆಗಸ್ಟ್ ತಿಂಗಳಿನಲ್ಲಿ ಎನ್‌ಡಿಎ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ಮಾಡಿತು. ಆ ಪ್ರಕಾರ ಸಬ್ಸಿಡಿ ದರದಲ್ಲಿ ವರ್ಷಕ್ಕೆ ನೀಡುವ ೧೨ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

ಸದ್ಯ ನೇರ ನಗದು ಪಾವತಿ ವ್ಯವಸ್ಥೆಯನ್ನು ದೇಶದ 54 ಜಿಲ್ಲೆಗಳಲ್ಲಿ ಜಾರಿಗೊಳಿಸಿ, ನಂತರ ಜ.1ರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಅಂತಿಮವಾಗಿ ಬರುವ ಜೂನ್‌ ವೇಳೆಗೆ ಬಹುತೇಕ ಎಲ್‌ಪಿಜಿ ಗ್ರಾಹಕರೂ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನ ಧನ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದವರಿಗೂ ಇದರಿಂದ ಅನುಕೂಲವಾಗಲಿದೆ. ಈತನಕ ಈ ಯೋಜನೆಯಡಿ 6 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು, ವರ್ಷದ ಕೊನೆಯ ಹೊತ್ತಿಗೆ ಇನ್ನೂ 4 ಕೋಟಿ ಖಾತೆಗಳನ್ನು ತೆರೆಯುವ ಗುರಿ ಇದೆ.

ಸದ್ಯ ಬ್ಯಾಂಕ್ ಖಾತೆ ಸಂಖ್ಯೆಗೆ ಎಲ್‌ಪಿಜಿ ಗ್ರಾಹಕ ಸಂಖ್ಯೆಯನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಇದು ಮುಗಿದ ಮೇಲೆ ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಿಡಿಯನ್ನು ಹಾಕಬಹುದು. 

ಆಧಾರ್‌ ಕಡ್ಡಾಯವಲ್ಲ: ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ ಪಡೆಯುವುದಕ್ಕೆ ‘ಆಧಾರ್‌ ಕಡ್ಡಾಯವಲ್ಲ ಎಂದೂ ಪ್ರಧಾನ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT