ADVERTISEMENT

ಐವರು ಕನ್ನಡಿಗರಿಗೆ ಪದ್ಮ ಪುರಸ್ಕಾರ

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2015, 9:21 IST
Last Updated 9 ಏಪ್ರಿಲ್ 2015, 9:21 IST

ನವದೆಹಲಿ (ಪಿಟಿಐ): ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಐಟಿ ಉದ್ಯಮಿ ಮೋಹನ್‌ದಾಸ್‌ ಪೈ, ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಸ್‌.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬುಧವಾರ ವಿವಿಧ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮ ದಲ್ಲಿ ವಿವಿಧ ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ವೀರೇಂದ್ರ ಹೆಗ್ಗಡೆ, ಬಾಲಿವುಡ್‌ ನಟ ಅಮಿತಾಭ್ ಬಚ್ಚನ್, ಉದ್ಯಮಿ ಕರೀಂ ಅಗಾ ಖಾನ್ ಮತ್ತು ಸುಪ್ರೀಂಕೋರ್ಟ್‌ನ ವಕೀಲ ಕೊಟ್ಟಾಯನ್‌ ಕೆ.ವೇಣು ಗೋಪಾಲ್‌ ಅವರು ದೇಶದ ಎರಡನೇ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ಸ್ವೀಕರಿಸಿದರು.

ಚಲನಚಿತ್ರ ನಿರ್ದೇಶಕ ಜಾಹ್ನು ಬರುವಾ, ಕಂಪ್ಯೂಟರ್ ವಿಜ್ಞಾನಿ ವಿಜಯ್ ಭಟ್ಕರ್ ಅವರು ಪದ್ಮಭೂಷಣ ಪುರಸ್ಕಾರ ಪಡೆದರು.
ಉದ್ಯಮಿ ಮೋಹನ್ ದಾಸ್‌ ಪೈ, ವಿಜ್ಞಾನಿ ಎಸ್‌.ಕೆ. ಶಿವಕುಮಾರ್‌, ಹಾಕಿ ಆಟಗಾರ್ತಿ ಸಬಾ ಅಂಜುಂ, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್‌, ಅರ್ಥಶಾಸ್ತ್ರಜ್ಞ ವಿವೇಕ್ ದೆಬ್ರೊ ಮತ್ತು ಸಂಗೀತಗಾರ ರವೀಂದ್ರ ಜೈನ್, ದಕ್ಷಿಣ ಭಾರತದ ಚಿತ್ರನಟ ಕೋಟಾ ಶ್ರೀನಿವಾಸರಾವ್‌ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಪ್ರಮುಖರು.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಗೃಹಸಚಿವ ರಾಜನಾಥ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಒಳಗೊಂಡಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.