ಹೈದರಾಬಾದ್(ಪಿಟಿಐ): ಹೈದರಾಬಾದ್ನಲ್ಲಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿಸಲಾಗಿದ್ದ ಐವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ದಳ(ಎನ್ಐಎ) ವಿಚಾರಣೆಗಾಗಿ 12 ದಿನ ತನ್ನ ವಶಕ್ಕೆ ಪಡೆದಿದೆ.
ಎನ್ಐಎ ವಶಕ್ಕೆ ಪಡೆದಿದ್ದ 11 ಮಂದಿ ಶಂಕಿತ ಐಎಸ್ ಉಗ್ರರಲ್ಲಿ ಐವರನ್ನು ಇಲ್ಲಿನ ಮೆಟ್ರೊಪಾಲಿಟಿನ್ ಸೆಷನ್ಸ್ ನ್ಯಾಯಾಲಯ ಜುಲೈ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಬಂಧಿತರು ಇದೇ ಶನಿವಾರ ಹೈದರಾಬಾದ್ನ ಮೂರು ಕಡೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು.
ಬಂಧಿತರನ್ನು ಚಂಚಲಗುಡ ಸೆರೆಮನೆಯಲ್ಲಿ ಇರಿಸಲಾಗಿತ್ತು. ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ಆರು ಜನರ ಹಾಗೂ ಅವರ ಕುಟುಂಬದವರ ಜತೆ ಸಮಾಲೋಚನೆ ನಡೆಸಿ ಮನೆಗೆ ಕಳುಹಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಬಂಧಿತರಿಂದ ವಶಪಡಿಸಿಕೊಂಡಿರುವ ರಾಸಾಯನಿಕ ವಸ್ತುಗಳ ಬಗ್ಗೆ ಗುರುವಾರ ಹೆಚ್ಚಿನ ಮಾಹಿತಿ ಲಭ್ಯವಾಗಿವೆ.
ಅವು ಯೂರಿಯಾ, ಅಮೋನಿಯಂ ನೈಟ್ರೇಟ್ ಹಾಗೂ ಸಕ್ಕರೆ ಜತೆಗಿನ ಮಿಶ್ರಣ ಎಂದು ಗುರುತಿಸಲಾಗಿದೆ. ಜತೆಗೆ ಅವರು ಮಿನರಲ್ ಆಸಿಡ್, ಅಸೇಟಿನ್, ಹೈಡ್ರೊಜನ್ ಪೆರಾಕ್ಸೈಡ್ ಅನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಇವುಗಳನ್ನು ಬಳಸಿ ಸ್ಫೋಟಕ ತಯಾರಿಸಲು ಯೋಜಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.