ADVERTISEMENT

ಕಲ್ಲಿದ್ದಲು ನಿಕ್ಷೇಪ: ಕಾಯ್ದಿಟ್ಟ ಆದೇಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2014, 19:30 IST
Last Updated 9 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ):  ‘ಸುಪ್ರೀಂ ಕೋರ್ಟ್‌ ಅಕ್ರಮ ಎಂದು ತೀರ್ಪು ನೀಡಿರುವ 218 ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿಯನ್ನು ರದ್ದುಪಡಿಸು­ವುದೇ ಸೂಕ್ತ’ ಎಂಬ ಅಭಿಪ್ರಾಯವನ್ನು ಕೇಂದ್ರ ವ್ಯಕ್ತಪಡಿಸಿದ್ದು, ಇದಕ್ಕೆ ಗಣಿ ಗುತ್ತಿಗೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ ಈ 218 ಮಂಜೂರಾತಿಗಳ ಭವಿಷ್ಯ ನಿರ್ಧರಿಸುವ ಕುರಿತ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

ಈಗ ನಡೆದಿರುವ ಅಕ್ರಮಗಳಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿ­ರುವ ಗಣಿ ಗುತ್ತಿಗೆದಾರರು ಪ್ರತಿ ಮಂಜೂರಾತಿಯ ತನಿಖೆಗಾಗಿ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ 218 ಗಣಿ ಮಂಜೂರಾತಿಗಳನ್ನು ಅಕ್ರಮ ಎಂದು ಪ್ರಕಟಿಸಿದ ಆ.25ರ ತೀರ್ಪಿನ ಪರಿಣಾ­ಮದ ಪರಾಮರ್ಶೆಗೆ ಸಮಿತಿ ರಚಿಸಲು ಉತ್ಸಾಹ ತೋರದ ಸರ್ಕಾರದ ಧೋರ­ಣೆ­ಯನ್ನು ’ದಿ ಕೋಲ್‌ ಪ್ರೊಡ್ಯೂಸರ್‌್ಸ ಅಸೋಸಿಯೇಷನ್‌, ‘ಸ್ಪಾಂಜ್‌ ಐರನ್‌ ಮ್ಯಾನು­ಫ್ಯಾಕ್ಚರರ್‍ಸ್ ಅಸೋಸಿ­ಯೇ­ಷನ್‌, ಇಂಡಿಪೆಂಡೆಂಟ್‌ ಪವರ್‌ ಪ್ರೊಡ್ಯೂ­­­ಸರ್‍ಸ್‌ ಅಸೋಸಿಯೇಷನ್‌ ಮತ್ತಿ­ತರ ಖಾಸಗಿ ಸಂಸ್ಥೆಗಳು ವಿರೋಧಿಸಿವೆ.

‘ಸುಪ್ರೀಂ ಕೋರ್ಟ್‌ ತೀರ್ಪಿನ ಪರಿ­ಣಾಮದಿಂದಾಗಿ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಸಹಜವಾಗಿಯೇ ರದ್ದಾ­ಗುತ್ತದೆ’ ಎಂಬ ಕೇಂದ್ರದ ನಿಲುವು ಸಂಪೂರ್ಣ ಹಾನಿಗೆ ಕಾರಣವಾಗು­ತ್ತದೆ. ಈಗಾಗಲೇ ವಿದ್ಯುತ್‌ ಕೊರತೆ­ಯಿಂದ ಬಳಲುತ್ತಿರುವ ಜನಸಾಮಾ­ನ್ಯರು ಮತ್ತು ಗ್ರಾಮೀರಿಗೆ ಇದರ ಬಿಸಿ ತಟ್ಟುತ್ತದೆ ಎಂದು ಅವು ಎಚ್ಚರಿಸಿವೆ.

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾ­ರವೇ ನ್ಯಾಯಾಲಯದ ದಿಕ್ಕುತಪ್ಪಿಸಿದೆ ಎಂದು ಗುತ್ತಿಗೆ ಕಂಪೆನಿಗಳ ಪರ ವಕೀಲರಾದ ಕೆ.ಕೆ.ವೇಣುಗೋಪಾಲ್‌, ಹರೀಶ್‌ ಸಾಳ್ವೆ ಮತ್ತಿತರರು ವಾದ ಮಂಡಿಸಿದರು.

ಆದರೆ ಮುಖ್ಯ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಅವರ ನೇತೃತ್ವದ ನ್ಯಾಯಪೀಠವು, ‘ನಿಕ್ಷೇಪಗಳ ಮಂಜೂರಾತಿಯಲ್ಲಿ ವಿಧಿವಿಧಾನಗಳ ಅನುಸರಣೆಯಾಗಿಲ್ಲ ಎಂಬುದು ಶೋಧನಾ ಸಮಿತಿಯ ಸಭೆಯ ನಡಾವಳಿಗಳಿಂದಲೇ ಗೊತ್ತಾಗುತ್ತದೆ’ ಎಂದು ಮಂಗಳವಾರ ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.