ADVERTISEMENT

ಕಾಂಗ್ರೆಸ್‌ ಸೋಲೊಪ್ಪಿದೆ: ಮೋದಿ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2014, 10:40 IST
Last Updated 30 ಏಪ್ರಿಲ್ 2014, 10:40 IST

ಅಹಮದಾಬಾದ್‌ (ಪಿಟಿಐ): ತೃತೀಯ ರಂಗಕ್ಕೆ ಬೆಂಬಲ ನೀಡುವ ಯೋಚನೆಯ ಮೂಲಕ ಕಾಂಗ್ರೆಸ್‌ ಈಗಾಗಲೇ ಸೋಲು ಒಪ್ಪಿಕೊಂಡಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಳಿಕ 63 ರ ಹರೆಯದ ಮೋದಿ ಅವರು ಮಾತನಾಡಿದರು.

ಪ್ರಿಯಾಂಕಾ ವಾಧ್ರಾ ಅವರ ಆರೋಪಗಳ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ನನ್ನನ್ನು ಪ್ರಧಾನಿ ರೇಸ್‌ನಿಂದ ಹೊರಗಿಡಲು ತೃತೀಯ ರಂಗವನ್ನು ಬೆಂಬಲಿಸುವುದಾಗಿ ಹೇಳುವ ಮೂಲಕ  ಕಾಂಗ್ರೆಸ್‌ ಈಗಾಗಲೇ ಸೋಲು ಒಪ್ಪಿಕೊಂಡಿದೆ. ಪ್ರಧಾನಿ, ಹಣಕಾಸು ಸಚಿವ ಹಾಗೂ ಇತರ ಹಿರಿಯ ಸಚಿವರು ಕಣದಲ್ಲಿ ಇಲ್ಲ. ಕಾಂಗ್ರೆಸ್‌ನ ಹಿರಿಯ ಮುಖಂಡರು ಚುನಾವಣೆಯಿಂದ ದೂರ ಓಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಮೋದಿ ಹಾಗೂ ಬಿಜೆಪಿ ವಿರುದ್ಧದ ಪ್ರಿಯಾಂಕಾ ಅವರ ವಾಗ್ದಾಳಿ ಬಗೆಗಿನ ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತರಿಸಿದ ಮೋದಿ, ‘ಇದೀಗ ಕೆಲವರು ತಮ್ಮ ಖುರ್ಚಿ ಉಳಿಸಲು ಯತ್ನಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮನ್ನು ತಾವೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಕಾಂಗ್ರೆಸ್‌ ಪಕ್ಷದ ಪ್ರತಿಷ್ಠೆ ಉಳಿಸಲು ಹರಸಾಹಸ ನಡೆಸಿದ್ದಾರೆ’ ಎಂದರು.

ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ಮುಖಂಡ ಎಲ್‌ ಕೆ ಅಡ್ವಾಣಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.