ನವದೆಹಲಿ (ಪಿಟಿಐ): ‘ಜನಲೋಕಪಾಲ’ ಮಸೂದೆ ಸಂಬಂಧ ಆಮ್ ಆದ್ಮಿ ಪಕ್ಷ ಹಾಗೂ ಸ್ವರಾಜ್ ಅಭಿಯಾನ್ದ ನಡುವಣ ವಾಕ್ಸಮರ ತಾರಕಕ್ಕೇರಿದೆ. ಟ್ವಿಟ್ಟರ್ ಹಾಗೂ ಪತ್ರಿಕಾಗೋಷ್ಠಿಯ ಬೆನ್ನಲ್ಲೇ, ಮಸೂದೆ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ದೆಹಲಿ ಮುಖ್ಯಮಂತ್ರಿಗೆ ಪಂಥಾಹ್ವಾನ ನೀಡಲು ಭೂಷಣ್ ಅವರು ಇದೀಗ ‘ಬಾನುಲಿ’ ಬಳಸಿಕೊಂಡಿದ್ದಾರೆ.
ಈ ಕುರಿತು ದೆಹಲಿಯ ಹಲವು ಎಫ್ಎಂ ಚಾನಲ್ಗಳಲ್ಲಿ ಭೂಷಣ್ ಅವರು ಜಾಹೀರಾತು ನೀಡಿದ್ದಾರೆ.
‘ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಜನಲೋಕಪಾಲ ಮಸೂದೆಯನ್ನು ಸಂಪುಟದಲ್ಲಿ ಅನುಮೋದಿಸಿದ್ದರು.ಕೊಟ್ಟಿದ್ದ ಭರವಸೆ ಈಡೇರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ನನಗೆ ಹಾಗೆ ಅನಿಸುತ್ತಿಲ್ಲ. ಮಸೂದೆ ದುರ್ಬಲಗೊಳಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ದೇಶವನ್ನು ವಂಚಿಸಿದ್ದಾರೆ ಎನಿಸುತ್ತಿದೆ. ಅದಕ್ಕಾಗಿಯೇ ನಾನು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿರುವೆ. ಯಾರದು ಸುಳ್ಳು ಯಾರದು ಸತ್ಯ ಎಂಬುದನ್ನು ಜನರೇ ತೀರ್ಮಾನಿಸಲಿ’ ಎಂದು ಜಾಹೀರಾತಿನಲ್ಲಿ ಭೂಷಣ್ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ‘ದುರ್ಬಲ’ ಮಸೂದೆಗೆ ಅನುಮೋದಿನೆ ನೀಡಿದ್ದಾರೆ ಎಂದು ಆರೋಪಿಸಿರುವ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರ ನೇತೃತ್ವ ಸ್ವರಾಜ್ ಅಭಿಯಾನ, ಒಂಬುಡ್ಸ್ಮನ್ ನೇಮಕ, ಅವರ ವಜಾ ಹಾಗೂ ಅವರ ತನಿಖಾ ವ್ಯಾಪ್ತಿಗೆ ಸಂಬಂಧಿತ ನಿಬಂಧನೆಗಳಿಂದಾಗಿ ಅದನ್ನು ‘ಮಹಾಜೋಕ್ಪಾಲ’ ಎಂದು ವ್ಯಂಗ್ಯವಾಡಿದ್ದಾರೆ.
ಖೇತನ್ ಪ್ರಶ್ನೆ: ಮತ್ತೊಂದೆಡೆ, ಭೂಷಣ್ ಅವರ ಆರೋಪಕ್ಕೆ ತಿರುಗೇಟು ನೀಡುವ ಹೊಣೆಯನ್ನು ಎಎಪಿಯು ಆಶೀಶ್ ಖೇತನ್ ಹೆಗಲಿಗೆ ನೀಡಿದೆ. ಕೇಜ್ರಿವಾಲ್ ವಿರುದ್ದದ ಟೀಕೆಗೆ ಎಎಪಿಯ ಆಶೀಶ್ ಖೇತನ್ ಸರಣಿ ಟ್ವೀಟ್ಗಳ ಮೂಲಕ ತಿರುಗೇಟು ನೀಡಿದ್ದಾರೆ.
‘ಜನಲೋಕಪಾಲ ಮಸೂದೆ –2015’ ಕುರಿತು ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರೊಟ್ಟಿಗೆ ಬಹಿರಂಗ ಚರ್ಚೆಗೆ ನಡೆಸಲು ನಾನು ಚಿಂತನೆ ನಡೆಸಿರುವೆ. ವ್ಯಾಪಂ ಹಗರಣ ಹಾಗೂ ಲೋಕಪಾಲ ನೇಮಿಸುವಲ್ಲಿ ವಿಫಲರಾದ ಮೋದಿ ವಿರುದ್ಧ ಪ್ರಶಾಂತ್ ಹಾಗೂ ಯಾದವ್ ಅವರು ಏಕೆ ಪ್ರತಿಭಟನೆ ನಡೆಸಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ‘ಮೋದಿ–ಅದಾನಿ ಮತ್ತು ಅಂಬಾನಿ ನಡುವಣ ವ್ಯವಹಾರದ ಕುರಿತು ಪ್ರಶ್ನಿಸುವುದನ್ನು ಪ್ರಶಾಂತ್ ನಿಲ್ಲಿಸಿದ್ದೇಕೆ? 2ಜಿ ಹಾಗೂ ಕಲ್ಲಿದ್ದಲು ಹಗರಣ ಬಯಲಿಗಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ಕಳೆದೊಂದು ವರ್ಷದ ತಮ್ಮ ರಾಜಕೀಯ ಜೀವನದ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ’ ಎಂದೂ ಖೇತನ್ ಟ್ವೀಟ್ ಮಾಡಿದ್ದಾರೆ.
ಚರ್ಚೆಗೆ ಹೆದರಿದ ಕೇಜ್ರಿವಾಲ್: ಖೇತನ್ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭೂಷಣ್ ‘ಅಣ್ಣ ಹಜಾರೆ ತಂಡದಲ್ಲಿ ನನ್ನೊಟ್ಟಿಗೆ ಸೇರಿಕೊಂಡು ಅರವಿಂದ್ ಕೇಜ್ರಿವಾಲ್ ಜನಲೋಕಪಾಲ ರಚಿಸಿದ್ದರು. ಇದೀಗ ಎಎಪಿಯ ಜೋಕ್ಪಾಲ ಕುರಿತು ನನ್ನೊಂದಿಗೆ ಚರ್ಚಿಸಲು ಕೇಜ್ರಿವಾಲ್ ಹೆದರಿದ್ದಾರೆ. ಇದೀಗ ಖೇತನ್ ಅವರನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ’ ಎಂದು ಪ್ರತಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.