ನವದೆಹಲಿ: ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟು ನಡೆಸಲು ಅವಕಾಶ ನೀಡುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ಪೂರ್ಣಗೊಂಡಿದೆ. ತಮಿಳುನಾಡು ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ಕರಡುವಿಗೆ ಕೇಂದ್ರ ಪರಿಸರ ಮತ್ತು ಕಾನೂನು ಸಚಿವಾಲಯ ಯಾವುದೇ ಬದಲಾವಣೆ ಸೂಚಿಸದೆ ಒಪ್ಪಿಗೆ ನೀಡಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ಪಟ್ಟಿಯಿಂದ ಗೂಳಿಯನ್ನು ಕೈಬಿಡುವುದು ಸುಗ್ರೀವಾಜ್ಞೆಯಲ್ಲಿರುವ ಮುಖ್ಯ ಅಂಶವಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ನಿರ್ಬಂಧಗಳನ್ನೆಲ್ಲ ಸೇರಿಸಿಕೊಂಡೇ ಸುಗ್ರೀವಾಜ್ಞೆಯ ಕರಡು ಸಿದ್ಧಪಡಿಸಲಾಗಿದೆ.
ಈ ರೀತಿಯ ಸುಗ್ರೀವಾಜ್ಞೆ ಕಾನೂನು ಸಮ್ಮತವೇ ಆಗಿರುತ್ತದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೇಳಿದ್ದಾರೆ. ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿ ಅಂಕಿತಕ್ಕಾಗಿ ಕಳುಹಿಸಲಾಗಿದೆ. ಇದಕ್ಕೆ ರಾಷ್ಟ್ರಪತಿ ಶನಿವಾರ ಸಹಿ ಮಾಡುವ ಸಾಧ್ಯತೆ ಇದೆ.
*
ರಾಷ್ಟ್ರಪತಿ ಅಂಕಿತ ಯಾಕೆ?
ಸಂವಿಧಾನದ 213ನೇ ವಿಧಿ ಪ್ರಕಾರ, ಕೇಂದ್ರದ ಕಾನೂನಿನ ಅಡಿಯಲ್ಲಿದ್ದು ರಾಜ್ಯಗಳು ಕೂಡ ಕಾನೂನು ರಚಿಸಬಹುದಾದ ಅಧಿಕಾರ ಹೊಂದಿರುವ ವಿಚಾರಗಳ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಕಡ್ಡಾಯ. ಇಂತಹ ವಿಚಾರಗಳಲ್ಲಿ ರಾಷ್ಟ್ರಪತಿ ಒಪ್ಪಿಗೆ ಇಲ್ಲದೆ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸುವಂತಿಲ್ಲ.
*
ನಿಲ್ಲದ ಆಕ್ರೋಶ
* ಐದನೇ ದಿನವೂ ತೀವ್ರ ಪ್ರತಿಭಟನೆ
* ಜಲ್ಲಿಕಟ್ಟು ಬೆಂಬಲಿಸಿ ಶುಕ್ರವಾರ ಸಿನಿಮಾ ಚಟುವಟಿಕೆ ಬಂದ್
* ತಮಿಳು ಸಿನಿಮಾ ನಟರಾದ ರಜನಿಕಾಂತ್, ಅಜಿತ್ ಕುಮಾರ್, ಸೂರ್ಯ, ಶಿವ ಕಾರ್ತಿಕೇಯನ್ ಪ್ರತಿಭಟನೆಯಲ್ಲಿ ಭಾಗಿ
* ಪ್ರಾಣಿ ದಯಾ ಸಂಘ ಪೆಟಾ ಜತೆ ಗುರುತಿಸಿಕೊಂಡು ಜಲ್ಲಿಕಟ್ಟು ವಿರೋಧಿಸಿ ಹೇಳಿಕೆ ನೀಡಿ ಜಲ್ಲಿಕಟ್ಟು ಪರ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದ ತ್ರಿಷಾ ಅವರಿಂದಲೂ ಹೋರಾಟಕ್ಕೆ ಬೆಂಬಲ
* ವಿವಿಧ ಸಂಘಟನೆಗಳು ನೀಡಿದ ಕರೆಯಂತೆ ನಡೆದ ಬಂದ್ನಿಂದಾಗಿ ಶುಕ್ರವಾರ ತಮಿಳುನಾಡಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.