ADVERTISEMENT

ಜಾಟ್‌ ಮೀಸಲಾತಿ ಹೋರಾಟ: ಸಮಸ್ಯೆ ಬಗೆಹರಿಸಲು ಸಭೆ ಕರೆದ ಹರಿಯಾಣ ಸರ್ಕಾರ

ಏಜೆನ್ಸೀಸ್
Published 16 ಮಾರ್ಚ್ 2017, 9:22 IST
Last Updated 16 ಮಾರ್ಚ್ 2017, 9:22 IST
ಜಾಟ್‌ ಮೀಸಲಾತಿ ಹೋರಾಟ: ಸಮಸ್ಯೆ ಬಗೆಹರಿಸಲು ಸಭೆ ಕರೆದ ಹರಿಯಾಣ ಸರ್ಕಾರ
ಜಾಟ್‌ ಮೀಸಲಾತಿ ಹೋರಾಟ: ಸಮಸ್ಯೆ ಬಗೆಹರಿಸಲು ಸಭೆ ಕರೆದ ಹರಿಯಾಣ ಸರ್ಕಾರ   

ಚಂಡೀಗಡ: ಜಾಟ್‌ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲು ಹರಿಯಾಣ ಸರ್ಕಾರ ಸಭೆ ಕರೆದಿದೆ.

ಸಭೆಯಲ್ಲಿ ಜಾಟ್‌ ಸಮುದಾಯದ ನಾಯಕರು ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ.

ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಮ್‌ನಿವಾಸ್‌ ಅವರು, ‘ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪಾಣಿಪತ್‌ನಲ್ಲಿ ಗುರುವಾರ ಬೆಳಿಗ್ಗೆ 11ಗಂಟೆಗೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಮುದಾಯದ ನಾಯಕರೊಂದಿಗೆ ಮುಕ್ತವಾಗಿ ಚರ್ಚಿಸಲಾಗುವುದು’ ಎಂದಿದ್ದಾರೆ.

ADVERTISEMENT

‘ಜತೆಗೆ ಶಿಕ್ಷಣ ಸಚಿವ ರಾಮ್‌ವಿಲಾಸ್‌ ಶರ್ಮಾ ಅವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಕೃಷ್ಟಕುಮಾರ್‌ ಬೇಡಿ ಹಾಗೂ ಸಂಸದೀಯ ವ್ಯವಹಾರಗಳ ಮುಖ್ಯ ಕಾರ್ಯದರ್ಶಿ ಕಮಲ್‌ಗುಪ್ತ ಅವರನ್ನೊಳಗೊಂಡ ತ್ರಿಸದಸ್ಯರ ಸಮಿತಿಯನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಜಾಟ್‌ ಸಮುದಾಯದ ಮೀಸಲಾತಿಗಾಗಿ ಒತ್ತಾಯಿಸುತ್ತಿರುವ ಹೋರಾಟಗಾರರು ಮಾರ್ಚ್‌ 17ರೊಳಗೆ ಬೇಡಿಕೆ ಈಡೇರಿಸದಿದ್ದರೆ, ಮಾರ್ಚ್‌ 20ರಂದು ದೆಹಲಿಯಲ್ಲಿ ಟ್ರಾಕ್ಟರ್‌ ಟ್ರ್ಯಾಲಿಗಳೊಡನೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.

‘ನಾವು ದೆಹಲಿ ಪ್ರತಿಭಟನೆಗೆ ಸಿದ್ಧತೆ ಮುಂದುವರಿಸಿದ್ದು, ಸಮಸ್ಯೆ ಬಗೆಹರಿಸದಿದ್ದರೆ ದೆಹಲಿ ಹೋರಾಟವನ್ನು ಖಂಡಿತ ನಿಲ್ಲಿಸುವುದಿಲ್ಲ’ ಎಂದು ಆಲ್‌ ಇಂಡಿಯಾ ಜಾಟ್‌ ಆರಕ್ಷಣ್‌ ಸಂಘರ್ಷ್ ಸಮಿತಿ ಅಧ್ಯಕ್ಷ ಯಶ್‌ಪಾಲ್‌ ಮಲಿಕ್‌ ಹೇಳಿದ್ದಾರೆ.

ಈ ಬಗ್ಗೆ ನಿವಾಸ್‌ ಅವರು, ‘ಈಗಾಗಲೇ ವಿವಿಧ ರಾಜ್ಯಗಳ 49 ಸಶಸ್ತ್ರ ಪಡೆಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಗಿದೆ. ರಾಜ್ಯದ 101ಸಶಸ್ತ್ರ ಪಡೆಗಳು ಶಾಂತಿ ಸುವ್ಯವಸ್ಥೆ ಕಾಪಾಡಲು ಸಜ್ಜಾಗಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಹೋರಾಟಗಾರರು ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿಗಾಗಿ ಒತ್ತಾಯಿಸಿ 2016 ಫೆಬ್ರವರಿಯಿಂದಲೂ ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.