ನವದೆಹಲಿ (ಪಿಟಿಐ/ಐಎಎನ್ಎಸ್): ಕ್ಷೇತ್ರ ಮಟ್ಟದ ಕೆಲಸದ ಅನುಭವವಿರುವ ಮುಖಂಡರಿಗೆ ನಾಯಕತ್ವದ ಹುದ್ದೆ ಕೊಟ್ಟು ಪಕ್ಷದ ಪುನಶ್ಚೇತನಕ್ಕೆ ಕಠಿಣ ಕ್ರಮ ಅನುಸರಿಸಬೇಕು ಎನ್ನುವ ಮೂಲಕ ಕಾಂಗ್ರೆಸ್ನ ಕೆಲವು ಮುಖಂಡರು ‘ಪಕ್ಷದ ಸೋಲಿಗೆ ರಾಹುಲ್ ತಂಡವೇ ಕಾರಣ’ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೇರ ಟೀಕಿಸದೆ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಮುಖಂಡರು, ‘ಗಂಭೀರ ಆತ್ಮವಿಮರ್ಶೆ’ಗೆ ಸೂಚಿಸಿದ್ದಾರೆ. ಆದರೆ ಅಮೃತಸರದಿಂದ ಗೆದ್ದಿರುವ ಕ್ಯಾಪ್ಟನ್ ಅಮ-ರಿಂದರ್ ಸಿಂಗ್ ಅವರಂತಹ ನಾಯಕರು, ಪಕ್ಷದ ಸೋಲಿಗೆ ‘ಸಾಮೂಹಿಕ ಹೊಣೆಗಾರಿಕೆ’ ಹೊರಬೇಕೆಂದು ಸಲಹೆ ಮಾಡಿದ್ದಾರೆ.
ರಾಹುಲ್ ಸಲಹೆಗಾರರು ತಳಮಟ್ಟದ ಕಾರ್ಯಕರ್ತರ ಮಾತನ್ನು ಆಲಿಸಲಿಲ್ಲ ಮತ್ತು ಅವರಿಗೆ ಚುನಾವಣಾ ಪ್ರಚಾರದ ಅನುಭವವಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಮಿಲಿಂದ್ ದೇವ್ರಾ ಬುಧವಾರ ಟೀಕಿಸಿದ್ದರು. ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದು, ‘ಪಕ್ಷದ ಬಗ್ಗೆ ಇರುವ ಅತಿಯಾದ ವಿಧೇಯತೆ ಮತ್ತು ಕಾಳಜಿಯೇ ತಮ್ಮ ಹೇಳಿಕೆಗೆ ಕಾರಣ’ ಎಂದು ಗುರುವಾರ ತಿಳಿಸಿದ್ದಾರೆ.
ಪಕ್ಷವು ಹೀನಾಯವಾಗಿ ಸೋತಿದ್ದರಿಂದ ಮನನೊಂದು ಹೇಳಿಕೆ ನೀಡಿರುವುದಾಗಿ ತಿಳಿಸಿರುವ ಅವರು, ಪಕ್ಷವು ಪುನಶ್ಚೇತನಗೊಂಡು ಮತ್ತೆ ಮೊದಲಿನಷ್ಟೇ ಬಲಿಷ್ಠವಾಗಬೇಕೆಂದು ಟ್ವೀಟ್ ಮಾಡಿದ್ದಾರೆ. ಪಕ್ಷದ ಕೆಳಮಟ್ಟದ ಕಾರ್ಯಕರ್ತರು ಮತ್ತು ಕ್ಷೇತ್ರ ಪ್ರಚಾರ ತಂತ್ರಗಾರಿಕೆ ಪ್ರಮುಖ ಅಂಶಗಳು. ಇದನ್ನು ಅನುಸರಿಸದಿರುವುದೇ ಸೋಲಿಗೆ ಮುಖ್ಯ ಕಾರಣ ಎಂದು ರಾಹುಲ್ ತಂಡದ ವೈಫಲ್ಯವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಪಕ್ಷದ ಇನ್ನೊಬ್ಬ ಹಿರಿಯ ಮುಖಂಡರಾದ ಸತ್ಯವ್ರತ ಚತುರ್ವೇದಿ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಕ್ಷದ ಪುನಶ್ಚೇತನಕ್ಕೆ ಕಠಿಣ ಕ್ರಮ ಅಗತ್ಯ ಎಂದು ತಿಳಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಪ್ರಿಯಾ ದತ್ ಅವರು ಸೋನಿಯಾ ಅವರನ್ನು ಭೇಟಿಯಾಗಿ ಪಕ್ಷದ ಮುಖಂಡರು ಮತ್ತು ಜರ ಮಧ್ಯೆ ಸಂಪರ್ಕ ಏರ್ಪಡದಿರುವುದು ಸೋಲಿಗೆ ಮುಖ್ಯ ಕಾರಣ ಎಂದು ವಿವರಿಸಿದ್ದಾರೆ ಎನ್ನಲಾಗಿದೆ. ದೇವ್ರಾ ಮತ್ತು ಪ್ರಿಯಾ ಅವರಿಬ್ಬರೂ ರಾಹುಲ್ ತಂಡದಲ್ಲಿದ್ದು ಚುನಾವಣೆಯಲ್ಲಿ ಸೋತಿದ್ದಾರೆ.
ಪ್ರಿಯಾಂಕಾಗೆ ಮಹತ್ವದ ಹುದ್ದೆ ನೀಡಲು ಆಗ್ರಹ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ಮಾಡಿರುವುದರಿಂದ ಪ್ರಿಯಾಂಕಾ ವಾಧ್ರಾ ಸೇರಿದಂತೆ ಯುವಕರು ಪಕ್ಷದ ನೇತೃತ್ವ ವಹಿಸಬೇಕು ಎಂಬುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ನಿರ್ಗಮಿಸುತ್ತಿರುವ ಸಚಿವ ಕೆ. ವಿ. ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾಂಕಾ ಅವರು ಅವರ ಅಜ್ಜಿ ಇಂದಿರಾಗಾಂಧಿ ಅವರನ್ನು ಹೋಲುವುದರಿಂದ ದೇಶದ ಜನತೆ ಮತ್ತು ಕಾರ್ಯಕರ್ತರು ಅವರ ನೇತೃತ್ವ ಬಯಸುತ್ತಿದ್ದಾರೆ ಎಂದು ಥಾಮಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ವಹಿಸುವುದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಟ್ಟಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.