ADVERTISEMENT

ನರೋದಾ ಪಟಿಯಾ ಪ್ರಕರಣ: ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಖುಲಾಸೆ, ಬಾಬು ಬಜರಂಗಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 20 ಏಪ್ರಿಲ್ 2018, 10:43 IST
Last Updated 20 ಏಪ್ರಿಲ್ 2018, 10:43 IST
ನರೋದಾ ಪಟಿಯಾ ಪ್ರಕರಣ: ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಖುಲಾಸೆ, ಬಾಬು ಬಜರಂಗಿಗೆ ಜೀವಾವಧಿ ಶಿಕ್ಷೆ
ನರೋದಾ ಪಟಿಯಾ ಪ್ರಕರಣ: ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಖುಲಾಸೆ, ಬಾಬು ಬಜರಂಗಿಗೆ ಜೀವಾವಧಿ ಶಿಕ್ಷೆ   

ಅಹಮದಾಬಾದ್: ಹದಿನಾರು ವರ್ಷಗಳ ಹಿಂದೆ ಅಲ್ಪಸಂಖ್ಯಾತರ ಕೋಮಿಗೆ ಸೇರಿದ 97 ಜನರ ಸಜೀವ ದಹನಕ್ಕೆ ಕಾರಣವಾಗಿದ್ದ ನರೋಡ ಪಟಿಯಾ ಕೊಮು ಗಲಭೆಗೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡ ಬಾಬು ಬಜರಂಗಿ ಸೇರಿದಂತೆ 31 ಜನರಿಗೆ  ಸ್ಥಳೀಯ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಬಾಬು ಬಜರಂಗಿ (ಮಧ್ಯ)

ADVERTISEMENT

ಗೋಧ್ರಾ ಘಟನೆಯ ನಂತರ ನಡೆದ ಕೋಮು ಗಲಭೆಯಲ್ಲಿ ಕೊಡ್ನಾನಿ ಮತ್ತು ಬಾಬು ಬಜರಂಗಿ ಮತ್ತು ಇತರ 30 ಜನರು ಕ್ರಿಮಿನಲ್ ಸಂಚು ಮತ್ತು ಕೊಲೆಯಲ್ಲಿ ಭಾಗಿಯಾಗಿರುವುದರಿಂದ ಐಪಿಸಿ ಕಲಂ 120ಮತ್ತು 302ರ ಪ್ರಕಾರ ಅಪರಾಧಿಗಳು ಎಂದು ನ್ಯಾಯಾಧೀಶರು ಘೋಷಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಪ್ತೆ ಹಾಗೂ ಬಿಜೆಪಿಯ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರಿಗೆ ಸ್ಥಳೀಯ ನ್ಯಾಯಾಲಯ 28 ವರ್ಷ ಸಜೆಯನ್ನು ವಿಧಿಸಿತ್ತು. ಹಾಗೇ ಭಜರಂಗ ದಳದ ನಾಯಕ ಬಾಬು ಬಜರಂಗಿಗೆ ಜೀವಾಧಿ ಶಿಕ್ಷೆ ನೀಡಿತ್ತು. 7 ಆರೋಪಿಗಳಿಗೆ 21 ವರ್ಷ ಜೈಲು ಶಿಕ್ಷೆ ಹಾಗೂ ಉಳಿದವರಿಗೆ 14 ವರ್ಷ ಜೈಲು ವಿಧಿಸಿತ್ತು. ಸ್ಥಳೀಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆರೋಪಿಗಳು ಗುಜರಾತ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿ, ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಗುಜರಾತ್ ಹೈಕೋರ್ಟ್‌ ಎತ್ತಿ ಹಿಡಿದಿದೆ.

ಪ್ರಕರಣದ ಹಿನ್ನೆಲೆ:  2002ರ ಫೆಬ್ರುವರಿ 27ರಂದು ಗೋಧ್ರಾದಲ್ಲಿ ರೈಲಿನಲ್ಲಿ ಸಜೀವ ದಹನ ಪ್ರಕರಣ ನಡೆದ ಮಾರನೇ ದಿನ ನಡೆದ ಕೋಮು ಗಲಭೆಯಲ್ಲಿ 97 ಜನರು ಸಜೀವ ದಹನಗೊಂಡಿದ್ದರು.

2002ರ ಫೆ. 28ರಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದ ಬಂದ್ ಸಂದರ್ಭದಲ್ಲಿ ನರೋಡ ಪಟಿಯಾ ಪ್ರದೇಶದಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಜನರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದ್ದರಿಂದ 97 ಜನರು ಮೃತಪಟ್ಟಿದ್ದರು ಮತ್ತು 33 ಜನರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾಬೆನ್ ಕೊಡ್ನಾನಿ ಅವರನ್ನು 2009ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಸಚಿವರಾಗಿದ್ದರು. ಕೊಡ್ನಾನಿ ಅವರು 1988ರಲ್ಲಿ ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ನಂತರ ಎರಡು ಬಾರಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.ಈ ಪ್ರಕರಣದ ವಿಚಾರಣೆಯು 2009ರಲ್ಲಿ ಆರಂಭವಾಗಿತ್ತು. 62 ಜನರ ವಿರುದ್ಧ ದೋಷಾರೋಪ ಸಿದ್ಧಪಡಿಸಲಾಗಿತ್ತು.

ಪ್ರತ್ಯಕ್ಷ ಸಾಕ್ಷಿಗಳು, ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಒಟ್ಟು 327 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು.

ಆರಂಭದಲ್ಲಿ ಗುಜರಾತ್ ಪೊಲೀಸರು 46 ಮಂದಿಯನ್ನು ಬಂಧಿಸಿದ್ದರು. ನಂತರ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ವಿಸ್ತ್ರತ ತನಿಖೆ ನಡೆಸಿ 24 ಜನರನ್ನು ಬಂಧಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 70 ಜನರನ್ನು ಬಂಧಿಸಲಾಗಿತ್ತು. ದೋಷಾರೋಪ ಸಿದ್ಧಪಡಿಸುವ ಮೊದಲೇ ಆರು ಮಂದಿ ಸತ್ತಿದ್ದರು.

ಗುಜರಾತ್ ಕೋಮು ಗಲಭೆಯ 9 ಪ್ರಕರಣಗಳಲ್ಲಿ ನರೋದಾ ಪಟಿಯಾ ಪ್ರಕರಣವೂ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.