ಉದಯಪುರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಜಾರಿಯಿಂದ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಕಾನೂನಿಗೆ ಜಿಎಸ್ಟಿ ಮಂಡಳಿ ಒಪ್ಪಿಗೆ ನೀಡಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಜಿಎಸ್ಟಿ ಜಾರಿಯಿಂದ ಮೊದಲ ಐದು ವರ್ಷಗಳವರೆಗೆ ರಾಜ್ಯಗಳಿಗೆ ಆಗುವ ನಷ್ಟ ತುಂಬಿಕೊಡಲು ಮಂಡಳಿ ಒಪ್ಪಿಗೆ ನೀಡಿದೆ’ ಎಂದು ಜೇಟ್ಲಿ ತಿಳಿಸಿದರು. ಜುಲೈ 1 ರಿಂದ ಜಿಎಸ್ಟಿ ಜಾರಿಗೆ ತರಬೇಕಾದರೆ ಬಜೆಟ್ ಅಧಿವೇಶನದ ಮುಂದಿನ ಭಾಗದಲ್ಲಿ ಅಂತಿಮ ಕರಡಿಗೆ ಶಾಸನಾತ್ಮಕ ಒಪ್ಪಿಗೆ ದೊರೆಯುವ ಅಗತ್ಯವಿದೆ.
‘ಜಿಎಸ್ಟಿಯಲ್ಲಿ ಪ್ರಸ್ತಾಪಿಸಿರುವ ವಿವಿಧ ಹಂತದ ತೆರಿಗೆ ಅಳವಡಿಕೆಗೆ ಅನುಮತಿ ನೀಡಲು ಮಾರ್ಚ್ 4 ಮತ್ತು 5 ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆ ಮಹತ್ವದ್ದಾಗಿದೆ. ಕೇಂದ್ರ ಸರ್ಕಾರದ (ಸಿ–ಜಿಎಸ್ಟಿ), ಸರಕು ಮತ್ತು ಸೇವೆಗಳ ಅಂತರ್ ರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಜಿಎಸ್ಟಿ (ಐ–ಜಿಎಸ್ಟಿ) ಮತ್ತು ರಾಜ್ಯಗಳ (ಎಸ್–ಜಿಎಸ್ಟಿ) ಕಾನೂನಿಗೆ ಅಂತಿಮ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ ಎಂದು ಸಭೆಯ ಬಳಿಕ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.