ADVERTISEMENT

ಬಿಜೆಪಿ ಮುಖಂಡರಿಗೆ ತಲೆಬಿಸಿ ತಂದ ಆರ್‌ಎಸ್‌ಎಸ್‌ ಹೇಳಿಕೆ!

ಪಿಟಿಐ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ನವದೆಹಲಿ: ‘ಮೀಸಲಾತಿ ನೀತಿಯ ಪುನರ್‌ ವಿಮರ್ಶೆ ಆಗಬೇಕು’ ಎಂದು ಆರ್‌ಎಸ್‌ಎಸ್‌ ಮುಖಂಡ ಮನಮೋಹನ ವೈದ್ಯ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಹೇಳಿಕೆ ನೀಡಿರುವುದು ಬಿಜೆಪಿ ನಾಯಕರ ತಲೆಬಿಸಿಗೆ ಕಾರಣವಾಗಿದೆ.

ಬಿಹಾರ ಚುನಾವಣೆಗೆ ಮುನ್ನ ಆರ್‌ಎಸ್‌ಎಸ್‌ ಕಡೆಯಿಂದ ಇಂಥದ್ದೇ ಹೇಳಿಕೆ ಬಂದಿತ್ತು. ಸಂಘ ತನ್ನ ಹೇಳಿಕೆ ಬಗ್ಗೆ ನಂತರ ಸ್ಪಷ್ಟನೆ ನೀಡಿದರೂ, ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತು.

ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಆರ್ಎಸ್‌ಎಸ್‌ ಪ್ರಚಾರ ಪ್ರಮುಖರಾದ ವೈದ್ಯ ಅವರು, ಮೀಸಲಾತಿಗೆ ಸಂಬಂಧಿಸಿದ ಹೇಳಿಕೆ ನೀಡಿದ್ದಾರೆ. ವೈದ್ಯ ಅವರ ಹೇಳಿಕೆ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು, ‘ಬಿಜೆಪಿ ಮೀಸಲಾತಿ ವಿರೋಧಿ’ ಎಂದು ಪ್ರಚಾರ ಮಾಡುತ್ತಿವೆ. ಇದನ್ನು ಗಮನಿಸಿದ ಬಿಜೆಪಿ ಮುಖಂಡರು, ‘ಆಗಿರುವ ತೊಂದರೆ ನಿವಾರಿಸಿ’ ಎಂದು ಸಂಘದ ಪ್ರಮುಖರಿಗೆ ಹೇಳಿದ್ದಾರೆ ಎನ್ನಲಾಗಿದೆ.

ADVERTISEMENT

ಬಿಜೆಪಿ ನಾಯಕರ ಒತ್ತಾಯದ ಕಾರಣಕ್ಕೇ, ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ವಿವಾದ ತಣ್ಣಗಾಗಿಸಲು ಶುಕ್ರವಾರವೇ ಪ್ರಯತ್ನಿಸಿದರು. ‘ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯಲಿ’ ಎಂದು ಸುದ್ದಿಗಾರರ ಬಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.