ನವದೆಹಲಿ: ಭಾರತರತ್ನ ಪುರಸ್ಕೃತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
ಚೆನ್ನೈ ಮೂಲದ ವಿಜಯ್ ಕ್ರಿಶ್ ಎಂಬುವರು ಉಸ್ತಾದ್ ಅವರ ಡೂಡಲ್ ಚಿತ್ರವನ್ನು ರಚಿಸಿದ್ದಾರೆ.
ಖಾನ್ ಅವರು 1961ರಲ್ಲಿ ಜನಿಸಿದರು. ಆರನೇ ವಯಸ್ಸಿಗೆ ವಾರಾಣಸಿಗೆ ತೆರಳಿದ ಇವರು ಶಹನಾಯಿಯ ಶಾಸ್ತ್ರೋಕ್ತವಾಗಿ ಕಲಿಕೆ ಆರಂಭಿಸಿದರು.
1947ರ ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಹಾಗೂ ಮೊದಲ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಇವರು ನುಡಿಸಿದ ಶಹನಾಯಿ ನಾದವು ಭಾರಿ ಮೆಚ್ಚುಗೆ ಗಳಿಸಿತ್ತು.
1977ರಲ್ಲಿ ಬಿಡುಗಡೆಯಾದ ಕನ್ನಡದ ಸನಾದಿ ಅಪ್ಪಣ್ಣ ಚಲನಚಿತ್ರದಲ್ಲಿ, ಡಾ.ರಾಜ್ಕುಮಾರ್ ಅವರು ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದ್ದಾರೆ. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ‘ಕರೆದರೂ ಕೇಳದೆ’ ಹಾಡಿನಲ್ಲಿ ಬರುವ ಶಹನಾಯಿ ವಾದನವೂ ಬಿಸ್ಮಿಲ್ಲಾ ಅವರದ್ದೇ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇವರು ಆಗಸ್ಟ್ 21, 2006ರಂದು ನಿಧನರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.