ADVERTISEMENT

ಬಿಹಾರ: ಗುಂಡಿಟ್ಟು ಬಿಜೆಪಿ ಮುಖಂಡನ ಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಪಟ್ನಾ: ಬಿಜೆಪಿಯ ಹಿರಿಯ ಮುಖಂಡ ಮತ್ತು ಬಿಹಾರ ಘಟಕದ ಉಪಾಧ್ಯಕ್ಷ ವಿಶ್ವೇಶ್ವರ ಓಜಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಆರ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ಓಜಾ ಅವರ ಮೇಲೆ 15 ಗುಂಡುಗಳನ್ನು ಹಾರಿಸಿದ್ದಾರೆ. ಓಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹಿರಿಯ ಅಧಿಕಾರಿಗಳ ಜತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿದೆ.

ಒಂದು ವಾರದ ಅಂತರದಲ್ಲಿ ನಡೆದ ಎರಡನೇ ರಾಜಕೀಯ ಹತ್ಯೆ ಇದಾಗಿದೆ. ಕಳೆದ ಶುಕ್ರವಾರ ಪಟ್ನಾದ ಫತುಹಾ ಪ್ರದೇಶದಲ್ಲಿ ಇನ್ನೊಬ್ಬ ಮುಖಂಡ ಬ್ರಿಜ್‌ನಾಥ್‌ ಸಿಂಗ್‌ ಅವರ ಹತ್ಯೆ ಆಗಿತ್ತು. ಎಕೆ–47 ಬಂದೂಕು ಉಪಯೋಗಿಸಿ ಸಿಂಗ್‌ ಅವರ ಹತ್ಯೆ ನಡೆದಿತ್ತು. ಇವರು ಸಮಾಜವಾದಿ ಪಕ್ಷದಿಂದ 2015ರ ನವೆಂಬರ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.

ಓಜಾ ಅವರ ಹತ್ಯೆ ಬಿಜೆಪಿ ವಲಯದಲ್ಲಿ ಆಘಾತ ಉಂಟು ಮಾಡಿದೆ. ಬಿಜೆಪಿಯ ಪ್ರಮುಖ ಮುಖಂಡರು ಸ್ಥಳಕ್ಕೆ ಧಾವಿಸಿದ್ದಾರೆ. ಮುಂದಿನ 72 ತಾಸುಗಳೊಳಗೆ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದರ ವಿರುದ್ಧ ಭಾರಿ ಆಂದೋಲನ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT