ಬೀದರ್: ಲಖನೌದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರಿಗೆ ಬೀದರ್ ಜಿಲ್ಲೆಯೊಂದಿಗೆ ನಂಟಿದೆ.
18 ತಿಂಗಳುಗಳ ಕಾಲ ಬರ ಪೀಡಿತ ಜಿಲ್ಲೆಯಾದ ಬೀದರ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಅನುರಾಗ್ ಇಲ್ಲಿನ ಸುರಂಗಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನೀರಿನ ಅಭಾವವನ್ನು ನೀಗಿಸುವ ಕಾರ್ಯವನ್ನು ಮಾಡಿದ್ದರು.
'ದ ಹಿಂದು' ಪತ್ರಿಕೆ ವರದಿ ಪ್ರಕಾರ 2016ರಲ್ಲಿ ಬೇಸಿಗೆ ಕಾಲದಲ್ಲಿ ತಿವಾರಿ ಬೀದರ್ ಜಿಲ್ಲೆಗೆ ಬಂದಾಗ ಇಡೀ ಜಿಲ್ಲೆ ಬರದಿಂದ ಕಂಗಾಲಾಗಿತ್ತು. 130ಕ್ಕಿಂತಲೂ ಹೆಚ್ಚು ಕೆರೆ ಮತ್ತು 110 ತೆರೆದ ಬಾವಿಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ ಇವರು ಕೆಲವೇ ತಿಂಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದರು. ಆ ವರ್ಷ ಬೀದರ್ ನಲ್ಲಿ ವಾಡಿಕೆಗಿಂತ ಶೇ.40ರಷ್ಟು ಹೆಚ್ಚು ಮಳೆಯಾಗಿ, ಜಲಾಶಯಗಳು ತುಂಬಿದ್ದವು.
ಸದಾ ಒಣಗಿರುತ್ತಿದ್ದ 500 ವರ್ಷಗಳಷ್ಟು ಹಳೇ ಜಹಾಜ್ ಕಿ ಬಾವ್ಡಿಯಲ್ಲಿಯೂ ನೀರು ಸಂಗ್ರಹವಾಗಿದ್ದು. ಇಲ್ಲಿಂದ ಸಾವಿರಾರು ಮಂದಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ಚಿಡ್ರಿ ರಸ್ತೆಯಲ್ಲಿದ್ದ ಕೆರೆ ಹೂಳಿನಿಂದ ತುಂಬಿತ್ತು. ಈ ಕೆರೆಯ ಹೂಳೆತ್ತಿದ ಕಾರಣ ಈಗ ಅಲ್ಲಿಯೂ ನೀರಿದೆ. ಇದೆಲ್ಲದರ ಹಿಂದೆ ತಿವಾರಿಯವರ ಜನಪರ ಕಾಳಜಿ ಇದೆ. ಪರಿಶ್ರಮವಿದೆ. ತಿವಾರಿಯವರ ಈ ಕಾಳಜಿಯೇ ಸರ್ಕಾರದ ಕೆರೆ ಸಂಜೀವಿನಿ ಯೋಜನೆಗೆ ಸ್ಫೂರ್ತಿ.
[related]
ಬೀದರ್ನಲ್ಲಿ ಪ್ರವಾಸಿಗಳನ್ನು ಆಕರ್ಷಿಸುವ ಸಲುವಾಗಿ ತಿವಾರಿ ಅವರ ಹಲವಾರು ಯೋಜನೆಗಳನ್ನೂ ಕೈಗೊಂಡಿದ್ದು ಮಾತ್ರವಲ್ಲದೆ, ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಜಿಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿಯೂ ಗಣಕೀಕರಣ ಮಾಡಿದ್ದರು.
ಸುರಂಗ ಬಾವಿ, ಕೆರೆ ಶುಚಿಗೊಳಿಸುವ ಯೋಜನೆಗಳಲ್ಲಿ ತಿವಾರಿ ಅವರಿಗೆ ನೆರವಾಗಿದ್ದ ಟೀಮ್ ಯುವ ಎಂಬ ಎನ್ಜಿಒ ಅಧ್ಯಕ್ಷ ವಿನಯ್ ಮಲ್ಗೆ, ತಿವಾರಿ ಇನ್ನಿಲ್ಲ ಎಂದು ನಂಬಲಾಗುತ್ತಿಲ್ಲ. ನಮ್ಮನೆ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.