ADVERTISEMENT

ಬೀಳ್ಕೊಡುಗೆ ಸಮಾರಂಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಪ್ರಣವ್ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 15:28 IST
Last Updated 23 ಜುಲೈ 2017, 15:28 IST
ಬೀಳ್ಕೊಡುಗೆ ಸಮಾರಂಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಪ್ರಣವ್ ಮುಖರ್ಜಿ
ಬೀಳ್ಕೊಡುಗೆ ಸಮಾರಂಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಪ್ರಣವ್ ಮುಖರ್ಜಿ   

ನವದೆಹಲಿ: ತನ್ನ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿ ಪ್ರಣವ್ ಮುಖರ್ಜಿ ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಿದ್ದಾರೆ.

ಭಾನುವಾರ ಸಂಸತ್ತಿನಲ್ಲಿ ತಮ್ಮ ವಿದಾಯ ಭಾಷಣ ಮಾಡಿದ ಮುಖರ್ಜಿ, ತನಗೆ ಅದ್ದೂರಿ ಬೀಳ್ಕೊಡುಗೆ ನೀಡಿದವರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ. ಇತ್ತೀಚೆಗೆ ಅನುಷ್ಠಾನಕ್ಕೆ ಬಂದ ಜಿಎಸ್‍ಟಿ ಬಗ್ಗೆ ಮಾತನಾಡಿದ ಮುಖರ್ಜಿ ಸಂಸತ್ತಿನಲ್ಲಿ ಜಿಎಸ್‍ಟಿಯನ್ನು ಅಂಗೀಕರಿಸಿರುವುದೇ ಸಂಸತ್ತಿನ ಪ್ರಬುದ್ಧತೆಯನ್ನು ತೋರಿಸುತ್ತದೆ. ಜಿಎಸ್‍ಟಿಗೆ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿರುವುದು ದೇಶದ ಆಡಳಿತ ವ್ಯವಸ್ಥೆಯ ಒಗ್ಗಟ್ಟನ್ನು ಬಿಂಬಿಸುತ್ತದೆ ಎಂದಿದ್ದಾರೆ.

ಏತನ್ಮಧ್ಯೆ, ಕದನ ಕಲಾಪಗಳ ವೇಳೆ ವಾಕ್ ಔಟ್ ಮತ್ತು ಪ್ರತಿಭಟನೆಗಳಿಂದಾಗಿ ಕಲಾಪಗಳು ಆಗಾಗ ಮುಂದೂಡಲ್ಪಟ್ಟಿರುವುದರ ಬಗ್ಗೆ ಮುಖರ್ಜಿ ಖೇದ ವ್ಯಕ್ತ ಪಡಿಸಿದ್ದಾರೆ. ಸಂಸತ್ತಿನಲ್ಲಿ ಈ ರೀತಿ ಸಮಯವನ್ನು ವ್ಯರ್ಥಗೊಳಿಸಿದ್ದು ಖೇದಕರ ಎಂದು ಅವರು ಹೇಳಿದ್ದಾರೆ,

ADVERTISEMENT

ನನ್ನ ವೃತ್ತಿ ಜೀವನಕ್ಕೆ ಮಾರ್ಗದರ್ಶನ ನೀಡಿದವರು ಇಂದಿರಾಗಾಂಧಿ. ಮೇರು ವ್ಯಕ್ತಿತ್ವ ಹೊಂದಿದ್ದ ಅವರು ನೇರವಂತಿಕೆಯ ನಡೆ ನುಡಿಯ ಧೈರ್ಯ ಶಾಲಿ. ತುರ್ತು ಪರಿಸ್ಥಿತಿ ನಂತರ ಅಧಿಕಾರ ಕಳೆದು ಕೊಂಡ ಇಂದಿರಾಗಾಂಧಿ 1978ರಲ್ಲಿ ಲಂಡನ್‍ಗೆ ಹೋಗಿದ್ದಾಗ ಅಲ್ಲಿ ಮಾಧ್ಯಮದವರು ಇಂದಿರಾಗಾಂಧಿ ಅವರಲ್ಲಿ ಪ್ರಶ್ನೆ ಕೇಳಲು ಕಾತರದಿಂದ ಕಾಯುತ್ತಿದ್ದರು.

ತುರ್ತು ಪರಿಸ್ಥಿತಿಯಿಂದ ನೀವು ಗಳಿಸಿದ್ದೇನು? ಎಂಬುದು ಮಾಧ್ಯಮದವರಿಂದ ತೂರಿಬಂದ ಮೊದಲ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಮಾಧ್ಯಮದವರ ಕಣ್ಣಲ್ಲಿ ಕಣ್ಣಿಟ್ಟು ಸಾವಧಾನದಿಂದ ಉತ್ತರಿಸಿದ ಇಂದಿರಾಗಾಂಧಿ, ಆ 21 ತಿಂಗಳಲ್ಲಿ ನಾವು ಇಡೀ ದೇಶದ ಜನರನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದೆವು ಎಂದರು.

ಈ ಉತ್ತರ ಕೇಳಿದ ನಂತರ ತುರ್ತು ಪರಿಸ್ಥಿತಿ ಬಗ್ಗೆ ಯಾರೊಬ್ಬರೂ ಪ್ರಶ್ನೆ ಕೇಳುವ ಧೈರ್ಯ ತೋರಿಸಲಿಲ್ಲ ಎಂದು ಪ್ರಣವ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.