ಗುವಾಹಟಿ: 'ಮನುಷ್ಯರು ಪಾಪ ಮಾಡಿದ್ದರೆ ಅವರಿಗೆ ಕ್ಯಾನ್ಸರ್ ಬರುತ್ತದೆ' -ಹೀಗೆ ಹೇಳಿದ್ದು ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಸರ್ಮಾ.
ಮಂಗಳವಾರ ಹೊಸತಾಗಿ ಉದ್ಯೋಗಕ್ಕೆ ಸೇರ್ಪಡೆಯಾದ ಶಾಲಾಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಪಾಪ. ದೇವರ ನ್ಯಾಯಾಲಯದಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗದೇ ಇರುವುದಿಲ್ಲ. ಕೆಲವರು ಕ್ಯಾನ್ಸರ್ಗೊಳಗಾಗುತ್ತಾರೆ, ಇನ್ನು ಕೆಲವರು ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಇದೆಲ್ಲವೂ ಪಾಪದ ಫಲ ಎಂದಿದ್ದಾರೆ.
ಬಿಸ್ವಾ ಅವರ ಮಾತನ್ನು ಖಂಡಿಸಿದ ಎಐಯುಡಿಎಫ್, ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಸಚಿವರು ಈ ರೀತಿ ಹೇಳಿರುವುದು ಹಾಸ್ಯಾಸ್ಪದ. ಕ್ಯಾನ್ಸರ್ ತಡೆಗಟ್ಟುವುದಕ್ಕಾಗಿ ಕೆಲವು ವರ್ಷಗಳ ಹಿಂದೆಯೇ ಸರ್ಮಾ ಅವರು ತಂಬಾಕು ನಿಷೇಧ ಕಾನೂನು ತಂದಿದ್ದರು. ಇದೀಗ ಅವರು ಹೇಳಿರುವ ಮಾತುಗಳು ಕ್ಯಾನ್ಸರ್ ರೋಗಿಗಳಿಗೆ ನೋವುಂಟು ಮಾಡುತ್ತದೆ ಎಂದು ಎಐಯುಡಿಎಫ್ ವಕ್ತಾರ ಅಮಿನುಲ್ ಇಸ್ಲಾಂ ಹೇಳಿದ್ದಾರೆ.
ಸರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಒಬ್ಬ ವ್ಯಕ್ತಿ ಪಕ್ಷದಿಂದ ಪಕ್ಷಕ್ಕೆ ಜಿಗಿದರೆ ಹೀಗಾಗುತ್ತದೆ ಟ್ವೀಟ್ ಮಾಡಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.