ಕೊಚ್ಚಿ: ಮಲಯಾಳಂ ನಟಿ ಪ್ರಯಾಣಿಸುತ್ತಿದ್ದ ಕಾರನ್ನು ಅಪಹರಿಸಿದ ನಾಲ್ಕು ಜನ ದುಷ್ಕರ್ಮಿಗಳ ತಂಡ ನಟಿ ಅವರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ನಟಿ ಅವರು ತ್ರಿಶೂರ್ನಿಂದ ಎರ್ನಾಕುಲಂ ಮಾರ್ಗವಾಗಿ ನೆಡುಂಬಾಶೇರಿ ಅಂತರ ರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಕಾರನ್ನು ಅಪಹರಿಸಿದ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಅದೇ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಬಳಿಕ ಪಲರಿವಟ್ಟಂ ಎಂಬಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ನಟಿ ಪ್ರಯಾಣಿಸುತ್ತಿದ್ದ ಕಾರನ್ನು ಮಾರ್ಟಿನ್ ಎಂಬಾತ ಚಲಾಯಿಸುತ್ತಿದ್ದ. ಎರ್ನಾಕುಲಂ ಸಮೀಪದ ನೆಡುಂಬಾಶೇರಿ ಎಂಬಲ್ಲಿ ಕಾರು ಆಟೊಗೆ ಡಿಕ್ಕಿಯಾಗಿದೆ. ನಂತರ ಕಾರಿನ ಚಾಲಕ ಆಟೊ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ನಟಿ ಆವರಿದ್ದ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಜತೆಗೆ, ಮಾರ್ಗ ಮಧ್ಯೆ ಸುನೀಲ್ ಎಂಬಾತ ದುಷ್ಕರ್ಮಿಗಳ ಜತೆಗೂಡಿ ಅವರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಘಟನೆ ಬಳಿಕ ನಟಿ ನೆಡುಂಬಾಶೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಸುನೀಲ್ ಎಂಬಾತ ನಟಿ ಅವರ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಾರಣಾಂತರಗಳಿಂದ ಕೆಲಸದಿಂದ ವಜಾಗೊಂಡಿದ. ನಟಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ಸುನೀಲ್ ಎಂಬಾತ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.