ADVERTISEMENT

ಮಹಾತ್ಮರ ಜಯಂತಿ, ಪುಣ್ಯತಿಥಿಯ 15 ರಜಾ ದಿನಗಳನ್ನು ರದ್ದು ಪಡಿಸಿದ ಉತ್ತರ ಪ್ರದೇಶ ಸರ್ಕಾರ

ಶಾಲೆಗಳಲ್ಲಿ 2 ಗಂಟೆ ವಿಶೇಷ ಕಾರ್ಯಕ್ರಮ

ಪಿಟಿಐ
Published 25 ಏಪ್ರಿಲ್ 2017, 18:06 IST
Last Updated 25 ಏಪ್ರಿಲ್ 2017, 18:06 IST
ಮಹಾತ್ಮರ ಜಯಂತಿ, ಪುಣ್ಯತಿಥಿಯ 15 ರಜಾ ದಿನಗಳನ್ನು ರದ್ದು ಪಡಿಸಿದ ಉತ್ತರ ಪ್ರದೇಶ ಸರ್ಕಾರ
ಮಹಾತ್ಮರ ಜಯಂತಿ, ಪುಣ್ಯತಿಥಿಯ 15 ರಜಾ ದಿನಗಳನ್ನು ರದ್ದು ಪಡಿಸಿದ ಉತ್ತರ ಪ್ರದೇಶ ಸರ್ಕಾರ   

ಲಖನೌ: ನಾಡಿನ ಶ್ರೇಷ್ಠ ವ್ಯಕ್ತಿಗಳ ಜನ್ಮದಿನ ಹಾಗೂ ಸ್ಮರಣಾರ್ಥವಾಗಿ ನೀಡಲಾಗುತ್ತಿದ್ದ ಸಾರ್ವತ್ರಿಕ ರಜಾದಿನವನ್ನು ರದ್ದು ಪಡಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹಾನ್‌ ವ್ಯಕ್ತಿಗಳ ಜಯಂತಿ ಹಾಗೂ ಪುಣ್ಯತಿಥಿ ದಿನದಂದು ಸಾರ್ವತ್ರಿಕ ರಜೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.

ಈ ನಿರ್ಧಾರದಿಂದಾಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ರಜೆಯಲ್ಲಿ 15 ದಿನ ಕಡಿತಗೊಂಡಂತಾಗಿದೆ. ಆ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಮಹಾತ್ಮರ ಕುರಿತು 2 ಗಂಟೆ ವಿಶೇಷ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ.

ADVERTISEMENT

ಸರ್ಕಾರಿ ನೌಕರರಿಗೆ ಸೂಚಿಸಲಾಗಿರುವ 15 ದಿನಗಳು ನಿರ್ಬಂಧಿತ ರಜಾದಿನವಾಗಲಿವೆ. ಹೆಚ್ಚಿರುವ ರಜಾ ದಿನಗಳಿಂದಾಗಿ ಶಾಲೆ ಕಾರ್ಯನಿರ್ವಹಿಸುವ ದಿನ 220 ರಿಂದ 120ಕ್ಕೆ ಇಳಿದಿದೆ. ಈ ರಜಾ ಸಂಸ್ಕೃತಿ ಹೀಗೆಯೇ ಮುಂದುವರಿದರೆ ಶಾಲೆಗಳಲ್ಲಿ  ಶಿಕ್ಷಣ ನೀಡಲು ಸಮಯವೇ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್‌ ಅಭಿಪ್ರಾಯ ಪಟ್ಟಿದ್ದರು.

ಮಹಾರಾಣಾ ಪ್ರತಾಪ್‌ ಜಯಂತಿ(ಮೇ 9), ಜಮತ್‌ ಉಲ್‌ ವಿದಾ(ಜೂನ್‌ 23),  ಛತ್‌ ಪೂಜಾ(ಅ.26), ಈದ್‌ ಮಿಲಾದ್‌ ಉನ್‌ ನಬಿ(ಡಿ2), ಚಂದ್ರಶೇಖರ್‌ ಜಯಂತಿ(ಏ.17), ಮಹರ್ಷಿ ಕಶ್ಯಪ ಮತ್ತು ಮಹಾರಾಜ್‌ ಗುಹಾ ಜಯಂತಿ (ಏ. 5) ಸೇರಿದಂತೆ ಒಟ್ಟು 15 ರಜೆ ದಿನಗಳನ್ನು ಉತ್ತರ ಪ್ರದೇಶ ಸರ್ಕಾರ ರದ್ದು ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.