ADVERTISEMENT

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲ: 19 ಶಾಸಕರು ಅಮಾನತು

ಪಿಟಿಐ
Published 22 ಮಾರ್ಚ್ 2017, 20:17 IST
Last Updated 22 ಮಾರ್ಚ್ 2017, 20:17 IST

ಮುಂಬೈ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಕಳೆದ ವಾರ ಬಜೆಟ್ ಮಂಡನೆಗೆ ಅಡ್ಡಿಪಡಿಸಿದ ಕಾರಣ  19 ಶಾಸಕರನ್ನು 9 ತಿಂಗಳ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.

ಕಾಂಗ್ರೆಸ್‌ನ 9 ಹಾಗೂ ಎನ್‌ಸಿಪಿಯ 10 ಶಾಸಕರನ್ನು ಡಿಸೆಂಬರ್ 31ರವರೆಗೆ ಅಮಾನತಿನಲ್ಲಿರಿಸುವ ಸಂಬಂಧ ಸಂಸದೀಯ ವ್ಯವಹಾರ ಸಚಿವ ಗಿರೀಶ್ ಬಾಪಟ್ ಅವರು ಮಂಡಿಸಿದ ನಿರ್ಣಯವನ್ನು  ವಿಧಾನಸಭೆ ಅಂಗೀಕರಿಸಿತು.

ಬಜೆಟ್ ಪ್ರತಿಗಳನ್ನು ಸದನದ ಹೊರಗೆ ಸುಟ್ಟುಹಾಕಿದ ಘಟನೆ ಹಿಂದೆಂದೂ ನಡೆದಿರಲಿಲ್ಲ ಎಂದಿರುವ ಬಾಪಟ್ ಅವರು, ಸದಸ್ಯರ ವರ್ತನೆ ಅಪಮಾನಕರ ಹಾಗೂ ಅಸಾಂವಿಧಾನಿಕ ಎಂದು ಹೇಳಿದ್ದಾರೆ.

‘ಪ್ರತಿಪಕ್ಷಗಳ ಎಲ್ಲ ಶಾಸಕರನ್ನು ಸರ್ಕಾರ ಅಮಾನತುಗೊಳಿಸಿದರೂ ರೈತರ ಸಮಸ್ಯೆಗಳ ಬಗ್ಗೆ ನಾವು ದನಿ ಎತ್ತುತ್ತೇವೆ’ ಎಂದು  ಪ್ರತಿಪಕ್ಷ ನಾಯಕ ರಾಧಾಕೃಷ್ಣ ಪಾಟೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.